ADVERTISEMENT

ಹಾವೇರಿ | 25 ವಿದ್ಯಾರ್ಥಿಗಳಿಗೆ ಉಚಿತ ನೀಟ್‌ ತರಬೇತಿ: ಸುರೇಶ ಮುರಡಣ್ಣನವರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 16:02 IST
Last Updated 12 ಆಗಸ್ಟ್ 2023, 16:02 IST

ಹಾವೇರಿ: ‘ನಗರದ ಶಿವಲಿಂಗೇಶ್ವರ ಕಂಪ್ಯೂಟರ್ಸ್‌ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ 25 ಬಡ ವಿದ್ಯಾರ್ಥಿಗಳಿಗೆ ಉಚಿತ ನೀಟ್ ಹಾಗೂ ಸಿಇಟಿ ತರಬೇತಿ, ರಿಯಾಯಿತಿ ದರದಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ’ ಎಂದು ಶಿವಲಿಂಗೇಶ್ವರ ಕಂಪ್ಯೂಟರ್ಸ್ ಸಂಸ್ಥೆ ಸಂಸ್ಥಾಪಕ ಸುರೇಶ ಮುರಡಣ್ಣನವರ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಹಾಗೂ ಮುಗಿಸಿರುವ 25 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್ ಹಾಗೂ ಸಿಇಟಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಿ, ಅದರಲ್ಲಿ ಉತ್ತಮ ಅಂಕಗಳಿಸಿ ಆಯ್ಕೆಗೊಂಡ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸೆ.1ರಿಂದ ನಿರಂತರ ಏಳು ತಿಂಗಳು ನೀಟ್ ಹಾಗೂ ಸಿಇಟಿ ತರಬೇತಿ ನೀಡಲಾಗುವುದು. ಆ.31ರವರೆಗೆ ಆನ್‍ಲೈನ್ ಹಾಗೂ ಆಫ್‍ಲೈನ್‍ನಲ್ಲಿ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ನಮ್ಮ ಸಂಸ್ಥೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ರಜತ ಮಹೋತ್ಸವ ಅಂಗವಾಗಿ ಉದ್ಯೋಗಾಧಾರಿತ ಕಂಪ್ಯೂಟರ್ ಕೋರ್ಸ್‍ಗಳನ್ನು 250 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಕೋವಿಡ್‍ನಿಂದಾಗಿ ಪಾಲಕರನ್ನು ಕಳೆದುಕೊಂಡ 50 ವಿದ್ಯಾರ್ಥಿಗಳಿಗೆ, 50 ವಿಧವಾ ಮಹಿಳೆಯರಿಗೆ, ವಿಶೇಷ ಚೇತನದ 50 ವಿದ್ಯಾರ್ಥಿಗಳಿಗೆ, 50 ಜನ ರೈತರ ಮಕ್ಕಳಿಗೆ, ದೇಶದ ಯೋಧರ 50 ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್‍ಗಳ ತರಬೇತಿ ನೀಡಿ ಒಂದು ತಿಂಗಳೊಳಗಾಗಿ ಉದ್ಯೋಗ ಕೊಡಿಸಲಾಗುವುದು. ಈಗಾಗಲೇ 60-80 ವಿದ್ಯಾರ್ಥಿಗಳು ಉಚಿತ ಕೌಶಲ ತರಬೇತಿ ಪಡೆಯುತ್ತಿದ್ದಾರೆ ಎಂದರು.

ADVERTISEMENT

25ನೇ ವಾರ್ಷಿಕೋತ್ಸವದ ನಿಮಿತ್ತ ಆ.31ವರೆಗೆ ಒಂದು ವರ್ಷದ ತರಬೇತಿಗೆ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ‘ವಿದ್ಯಾಸಿಂಧು ಸ್ಕಾಲರ್‌ಶಿಪ್‌’ ಹಾಗೂ ಕಂಪ್ಯೂಟರ್ ಸೇವೆಗಳಿಗೆ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಕಿಯೋನಿಕ್ಸ್ ಕೇಂದ್ರದಿಂದ ತರಬೇತಿ ಪಡೆದ ಅರ್ಹ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರವು ಸರ್ಕಾರಿ ಉದ್ಯೋಗಕ್ಕೆ ಅನೂಕೂಲವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಆಫ್ರೀನ್‍ಬಾನು ಬೋರ್ಗಲ್, ಸುಮಯ್ಯಾ ತಟಗಾರ, ಜಯದೇವ ಕೆ., ಚಂದ್ರಕಾಂತ್ ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.