ರಾಣೆಬೆನ್ನೂರು: ಅತ್ಯಂತ ಹಿಂದುಳಿದಿರುವ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಗೆ ಸೇರಿಸಬೇಕು ಎಂದು ಒತ್ತಾಯಿಸಲು ಹೋರಾಟ ಸಮಿತಿ ರಚಿಸುವ ಕುರಿತು ವಾರದೊಳಗೆ ಗಂಗಾಮತ ಸಮಾಜದ ಸಭೆಯಲ್ಲಿ ಸರ್ವ ಸದಸ್ಯರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದು ಗಂಗಾಮತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಜಡಮಲಿ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಸ್ತ, ಬೋವಿ, ಅಂಬಿಗ, ಸುಣಗಾರ, ಜಾಡಮಲಿ, ಕೋಲಕಾರ, ಮೊಗವೀರ, ತಳವಾರ, ಪರಿವಾರ, ಬಾರ್ಕಿ, ಗಂಗಾಮತ, ಕೋಳಿ, ಟೋಕರಿ, ಕೋಲಿ ಸೇರಿದಂತೆ 26 ಪರ್ಯಾಯ ಪದಗಳನ್ನು ಹೊಂದಿರುವ ಹಿಂದುಳಿದಿರುವ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಲಾಗುವುದು’ ಎಂದರು.
‘ಗಂಗಾಮತ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಪರಿಶಿಷ್ಟ ಪಂಗಡ ಮೀಸಲಾತಿಯಿಂದ ವಂಚಿತವಾಗಿದೆ’ ಎಂದರು.
‘ಈ ಸಮಾಜಕ್ಕೆ ರಾಜ್ಯದಲ್ಲಿ ಹಾವೇರಿ ತಾಲ್ಲೂಕಿನ ನರಶೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಏಕೈಕ ಪೀಠವಾಗಿದೆ. ಪೀಠದ ಮಾರ್ಗದರ್ಶನದಲ್ಲಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು’ ಎಂದರು.
‘ಮೀಸಲಾತಿ ಘೋಷಣೆ ಮಾಡದಿದ್ದರೆ ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿಯೂ ಪ್ರತಿಭಟನೆ ನಡೆಸುವ ಮೂಲಕ ಹಕ್ಕೋತ್ತಾಯ ಮಾಡಲಾಗುವುದು. ಒಂದು ವಾರದೊಳಗಾಗಿ ಸಭೆ ಕರೆದು ತೀರ್ಮಾನಿಸಲಾಗುವುದು’ ಎಂದು ರಾಜು ಜಡಮಲಿ ಮನವಿ ಮಾಡಿದರು.
ಆರ್.ಎಚ್. ಐರಣಿ, ಹೊನ್ನಪ್ಪ ತಿಮ್ಮೇನಹಳ್ಳಿ, ಕೊಟೇಶಪ್ಪ ಕುದರಿಹಾಳ, ಕರಬಸಪ್ಪ ಬಾರ್ಕಿ, ಕಾಳಪ್ಪ ಅಂಬಿಗೇರ, ರಾಜು ರಟ್ಟಿಹಳ್ಳಿ, ಹೊನ್ನಪ್ಪ ಹರವಿ, ಮೂರ್ತಿ ಸುಣಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.