ADVERTISEMENT

ಹಾವೇರಿ | ಗೌರಿ ಹುಣ್ಣಿಮೆ: ಸಕ್ಕರೆ ಗೊಂಬೆ ಖರೀದಿ ಜೋರು

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 3:08 IST
Last Updated 5 ನವೆಂಬರ್ 2025, 3:08 IST
ರಾಣೆಬೆನ್ನೂರಿನ ದೊಡ್ಡಪೇಟೆಯಲ್ಲಿ ಗೌರಿ ಹುಣ್ಣಿಮೆ ಹಬ್ಬಕ್ಕೆ ಜನರು ಸಕ್ಕರೆ ಗೊಂಬೆಗಳನ್ನು ಖರೀದಿಸಿದರು
ರಾಣೆಬೆನ್ನೂರಿನ ದೊಡ್ಡಪೇಟೆಯಲ್ಲಿ ಗೌರಿ ಹುಣ್ಣಿಮೆ ಹಬ್ಬಕ್ಕೆ ಜನರು ಸಕ್ಕರೆ ಗೊಂಬೆಗಳನ್ನು ಖರೀದಿಸಿದರು   

ಹಾವೇರಿ/ರಾಣೆಬೆನ್ನೂರು: ಗ್ರಾಮೀಣ ಪ್ರದೇಶಗಳಲ್ಲಿ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಬಾಲಕಿಯರು ಹಾಗೂ ಮಹಿಳೆಯರು, ಗೌರಿ ಹುಣ್ಣಿಮೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬುಧವಾರ (ನ. 5) ಗೌರಿ ಹುಣ್ಣಿಮೆ ಹಬ್ಬವಿದೆ. ಇದರ ಮುನ್ನಾದಿನವಾದ ಮಂಗಳವಾರ ಜಿಲ್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಸಕ್ಕರೆ ಗೊಂಬೆಗಳನ್ನು ಜನರು ಖರೀದಿಸಿದರು.

ಗೌರಿ ಹುಣ್ಣಿಮೆ ದಿನದಂದು ಬಾಲಕಿಯರು ಹಾಗೂ ಮಹಿಳೆಯರಿಗೆ ಹೂವಿನ ದಂಡೆ ಮಾಡಿ ಸಕ್ಕರೆ ಗೊಂಬೆ ನೀಡಿ ಆರತಿ ಮಾಡುವ ಸಂಪ್ರದಾಯವಿದೆ. ಮೊಮ್ಮಕ್ಕಳಿಗೆ, ಅಜ್ಜ–ಅಜ್ಜಿಯಂದಿರು ಸಕ್ಕರೆ ಗೊಂಬೆ ಹಾಗೂ ಕೋಲಾಟದ ಕೋಲುಗಳನ್ನು ನೀಡುವ ಪದ್ಧತಿಯಿದೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ಕಾರಣಕ್ಕೆ ಗ್ರಾಮೀಣ ಜನರು, ನಗರಗಳಿಗೆ ಬಂದು ಮಂಗಳವಾರ ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಬೆಳ್ಳಿ– ಮಣ್ಣಿನ ಗೌರಿ ದೇವಿ ಮೂರ್ತಿ, ಸಕ್ಕರೆಯಿಂದ ತಯಾರಿಸಿದ ಗೌರಿ ದೇವಿ ಮೂರ್ತಿಗಳು, ದಂಡೆ, ಕೋಲಾಟದ ಕೋಲುಗಳು, ಹೂವಿನ ಮಾಲೆ, ಸಿಹಿ ತಿನಿಸು, ಹೊಸ ಬಟ್ಟೆ ಖರೀದಿ ಹೆಚ್ಚಾಗಿತ್ತು.

ದೀಪಾವಳಿ ಹಬ್ಬ ಮುಗಿದ ಕೂಡಲೇ ಗೌರಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಸಕ್ಕರೆ ಆರತಿಗಳ ಮಾರಾಟ ಆರಂಭವಾಗಿದೆ. ಸಕ್ಕರೆ ಪಾಕದಲ್ಲಿ ತಯಾರಿ ಮಾಡಿದ ಶಿವ ಮತ್ತು ಪಾರ್ವತಿ, ಗಣೇಶ, ಗೋಪುರ, ಕಳಸ, ಆರತಿ ಅಚ್ಚು, ತೇರು, ರಾಜ, ಸೈನಿಕ, ಬತ್ತಾಸು, ಕುದುರೆ, ಒಂಟೆ, ಆನೆ ಅಂಬಾರಿ, ಸೇರಿದಂತೆ ವಿವಿಧ ವರ್ಣದ ಗೊಂಬೆಗಳು ಮಾರುಕಟ್ಟೆಯಲ್ಲಿದ್ದವು.

ಕೆ.ಜಿ.ಗೆ ₹ 100ರಿಂದ ₹ 250 ದರದಲ್ಲಿ ಸಕ್ಕರೆ ಗೊಂಬೆಗಳ ಮಾರಾಟ ನಡೆಯಿತು. ಗೌರಿ ಹುಣ್ಣಿಮೆಯ ದಿನ ಸಕ್ಕರೆ ಆರತಿಗಳನ್ನು ಬೆಳಗುವುದು ಯುವತಿಯರಿಗೆ ಹಾಗೂ ಮಹಿಳೆಯರಿಗೆ ಸಂಭ್ರಮದ ಕ್ಷಣವಾಗಿರುತ್ತದೆ. ಮಕ್ಕಳು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಅದರಲ್ಲಿ ದೀಪಗಳನ್ನು ಇಟ್ಟುಕೊಂಡು ಗೌರಿದೇವಿ ಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ತೆರಳಿ ಭಕ್ತಿಯಿಂದ ಆರತಿ ಬೆಳಗುವ ಸಂಪ್ರದಾಯವಿದೆ.

ಮದುವೆಯಾದ ಮಹಿಳೆಯರು ತವರು ಮನೆಯವರು ಬರುವ ಕ್ಷಣಕ್ಕಾಗಿ ಕಾಯುತ್ತಿರುತ್ತಾರೆ. ಗೌರಿ ಹುಣ್ಣಿಮೆಯ ಮೊದಲ ದಿನ ಹಾಗೂ ಕೊನೆಯ ದಿನ ಹೋಳಿಗೆ ಮಾಡಿ ನೈವೇದ್ಯ ಮಾಡಲಾಗುತ್ತದೆ. ಮಧ್ಯದ ದಿನಗಳಲ್ಲಿ ಮಕ್ಕಳು, ಯುವತಿಯರು ಬಾಳೆ ಹಣ್ಣು, ನಿಂಬೆ ಹಣ್ಣು, ಹೀರೇಕಾಯಿ, ಸೌತೆಕಾಯಿ ಗಾಲಿಗಳ ಸುರಳಿ ಆಕಾರದಲ್ಲಿ ಕತ್ತರಿಸಿ ಅದರಲ್ಲಿ ಕಡ್ಲಿ ಬತ್ತಿಯನ್ನು ತುಪ್ಪದಲ್ಲಿ ಅದ್ದಿ ಇಟ್ಟು, ಪೇರಲೆ ಹಣ್ಣುಗಳ ಮತ್ತು ಉತ್ತರಾಣಿ ಕಡ್ಡಿ, ಹೂಗಳಿಂದ ದೀಪ ಧೂಪ ಬೆಳಗುವ ಪದ್ಧತಿಯಿದೆ.

ಹಾವೇರಿಯ ಎಂ.ಜಿ. ರಸ್ತೆಯಲ್ಲಿ ಜನರು ಸಕ್ಕರೆ ಗೊಂಬೆಗಳನ್ನು ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.