ಹಾವೇರಿ: ದೀಪಾವಳಿ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಪ್ರತಿ ವರ್ಷ ನಡೆಯುವ ‘ಹೋರಿ ಹಬ್ಬ’ಕ್ಕೆ ಜಿಲ್ಲಾಡಳಿತ ಈ ವರ್ಷವೂ ಅವಕಾಶ ಮಾಡಿಕೊಡಬೇಕು ಎಂದು ಅಖಿಲ ಕರ್ನಾಟಕ ರೈತರ ಜಾನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಡಿ.ಬಂಡಿವಡ್ಡರ ಮನವಿ ಮಾಡಿದ್ದಾರೆ.
ದೀಪಾವಳಿ ಸಂದರ್ಭ ಜಾನುವಾರುಗಳನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ. ಈ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬ (ಹಟ್ಟಿ ಹಬ್ಬ) ಬಹಳ ವಿಶೇಷತೆ ಹೊಂದಿದೆ. ರೈತರಿಗೆ, ಯುವಕರಿಗೆ ಮತ್ತು ಪೈಲ್ವಾನರಿಗೆ ಹಾಗೂ ಕೊಬ್ಬಿದ ಹೋರಿಗಳಿಗೆ ಅತ್ಯಂತ ಉತ್ಸಾಹದಾಯಕ ಸ್ಪರ್ಧೆಯಾಗಿದೆ ಎಂದು ತಿಳಿಸಿದ್ದಾರೆ.
ಹೋರಿಗಳ ಕೊರಳಿಗೆ ಗೆಜ್ಜೆ ಕಟ್ಟಿದ ದಿನದಿಂದ ಅವುಗಳ ನಡತೆಯೇ ಬದಲಾಗುತ್ತದೆ. ಹೋರಿಗಳು ಚಿನ್ನಾಟವಾಡಲು ಆರಂಭಿಸುತ್ತವೆ. ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಧ್ಯೋತಕವಾಗಿ ‘ಹೋರಿ ಹಬ್ಬ’ವನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತರ ಕಾಯ್ದುಕೊಂಡು, ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕೃಷಿ ಸಚಿವ, ಗೃಹ ಸಚಿವ, ಸಂಸದರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ. ಹಾಗಾಗಿ ಅವಕಾಶ ಮಾಡಿಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.