ಹಾವೇರಿ: ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ನಗರದ ಕ್ರೈಸ್ತ ಸಮುದಾಯದ ಕುಟುಂಬಗಳು ಗುಡ್ ಫ್ರೈಡೆಯನ್ನು (ಶುಭ ಶುಕ್ರವಾರ) ಮನೆಯಲ್ಲೇ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಪ್ರತಿ ವರ್ಷ ಬೆಳಿಗ್ಗೆ 11ರಿಂದ 3ರವರೆಗೆ ಚರ್ಚ್ಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತಿದ್ದವು. ಈ ಬಾರಿ ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಚರ್ಚ್ಗಳ ಬಾಗಿಲನ್ನು ತೆರೆಯಲಿಲ್ಲ ಹಾಗೂ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು.
‘ಏಸು ಸ್ವಾಮಿಯ ಸಪ್ತ ವಾಕ್ಯಗಳನ್ನು ಓದುವುದು, ಅರ್ಥೈಸಿಕೊಳ್ಳುವುದು, ಪ್ರಾರ್ಥನೆ ಸಲ್ಲಿಸುವುದು, ಗೀತೆಗಳನ್ನು ಹಾಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಮನೆಯಲ್ಲೇ ಆಚರಿಸಿದೆವು. ಕೊರೊನಾ ಸೋಂಕು ನಿವಾರಣೆಯಾಗಿ, ದೇಶ ಸುರಕ್ಷಿತವಾಗಿರಲಿ ಎಂದು ಬೇಡಿಕೊಂಡೆವು’ ಎಂದು ನಗರದ ಮಾಧುರಿ ದೇವದಾರ್ ಮತ್ತು ಜಾನ್ ಗುರುಸಿದ್ದಪ್ಪ ದೇವದಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಪ್ಪು ಮಾಡಿದವರನ್ನು ನಾವು ಕ್ಷಮಿಸಿದರೆ, ನಮ್ಮ ತಪ್ಪುಗಳು ಕ್ಷಮಿಸಲ್ಪಡುತ್ತವೆ ಎಂದು ಸಾರಿದ ಏಸುಸ್ವಾಮಿಯ ಜೀವನ ಮತ್ತು ಸಂದೇಶವೇ ಬದುಕಿಗೆ ದಾರಿದೀಪ. ಪ್ರೀತಿ, ಶಾಂತಿ ಮತ್ತು ಕ್ಷಮೆ ಈ ಮೂರು ಅಂಶಗಳೇ ಬದುಕಿನ ದಿವ್ಯ ಮಂತ್ರಗಳು ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.