ಶಿಗ್ಗಾವಿ: ‘ಮೌಲ್ಯಾಧಾರಿತ ಬದುಕಿಗೆ ಸೇವಾ ಕಾಯಕಗಳು ಅವಶ್ಯವಾಗಿದ್ದು, ಅಂತಹ ಕಾಯಕದಿಂದ ಹಡಪದ ಅಪ್ಪಣ್ಣನವರು ಮನುಕುಲದ ಬದುಕನ್ನು ಬದಲಾಯಿಸಿದ್ದಾರೆ. ಅಂತಹ ಮಹಾತ್ಮರ ಸಂದೇಶಗಳನ್ನು ಪಾಲಿಸುವುದು ಅಗತ್ಯ’ ಎಂದು ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ವೈಜನಾಥ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ನಡೆದ ನಿಜಸುಖಿ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬರ ಶ್ರಮ ಮುಖ್ಯ. ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿವೃದ್ಧಿ ಮಂತ್ರ ಜಪಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ’ ಎಂದರು.
ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಷಣ್ಮುಖಪ್ಪ ಕಾಯಕದ ಮಾತನಾಡಿ, ‘ಹಡಪದ ಅಪ್ಪಣ್ಣ ಸಮಾಜ ಅತೀ ಹಿಂದುಳಿದಿದ್ದು, ಸಮಾಜಕ್ಕೆ ಒಂದು ಸುಸಜ್ಜಿತ ಸಮುದಾಯ ಭವನ ನಿರ್ಮಾಣವಾಗಬೇಕು. ಜನಪ್ರತಿನಿಧಿಗಳ ಗಮನ ಹರಿಸಬೇಕು. ಅದಕ್ಕಾಗಿ ಸಮಾಜದ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುವುದು ಅಗತ್ಯ’ ಎಂದರು.
ದಲಿತ ಸಮಾಜದ ಮುಖಂಡ ಡಿ.ಎಸ್.ಮಾಳಗಿ ಮಾತನಾಡಿ, ಕಂದಾಚಾರ, ‘ಮೂಡನಂಬಿಕೆಗಳನ್ನು ಬಿಟ್ಟು ಸಮಾಜದ ಶ್ರೇಯೋಭಿವೃದ್ಧಿಗೆ ದುಡಿಯಬೇಕು’ ಎಂದರು.
ಹಡಪದ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ, ಮುಖಂಡರಾದ ಶಿವಾನಂದ ಮ್ಯಾಗೇರಿ, ಶಶಿಧರ ಹೊಣ್ಣನವರ ಮಾತನಾಡಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ರಂಗದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಮುಖಂಡರಾದ ಫಕ್ಕೀರಪ್ಪ ಕುಂದೂರ, ಕಾಳಪ್ಪ ಬಡಿಗೇರ, ಮಂಜುನಾಥ ಹಡಪದ, ಬಸವರಾಜ ಹಡಪದ, ಸುರೇಶ ಕ್ಷೌರದ, ಗುರುಬಸಪ್ಪ ಹಡಪದ, ಬಸಪ್ಪ ಕ್ಷೌರದ, ಬಸನಗೌಡ್ರ ಮೇಗಲಮನಿ, ಗುಂಡಪ್ಪ ಹಡಪದ, ಮಲ್ಲಪ್ಪ ಹಡಪದ, ಅಪ್ಪಣ್ಣ ಹಡಪದ, ಬಸವರಾಜ ಕಾಯಕದ, ಶಿವು ಹಡಪದ ಇದ್ದರು.
‘ಕಾಯಕದಲ್ಲಿ ನಿಷ್ಠೆ ಇರಲಿ’
ಪಟ್ಟಣದ ಪಾದಕಟ್ಟಿಯಲ್ಲಿ ನಿಜಸುಖಿ ಹಡಪದ ಅಪ್ಪಣ್ಣವರ ಜಯಂತ್ಯುತ್ಸವ ಅಂಗವಾಗಿ ನಡೆದ ಭಾವಚಿತ್ರದ ಮೆರವಣಿಗೆಗೆ ಅಥಣಿ ಕಕಮರಿಮಠದ ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ‘ಕಾಯಕದಲ್ಲಿ ಮೇಲು– ಕೀಳು ಎಂಬ ಭಾವನೆ ಸರಿಯಲ್ಲ. ಮಾಡುವ ಕಾಯಕದಲ್ಲಿ ನಿಷ್ಠೆ ಪ್ರಾಮಾಣಿಕತೆ ಇರಬೇಕು’ ಎಂದರು.
ನಂತರ ಆರಂಭವಾದ ಮೆರವಣಿಗೆ ಪಟ್ಟಣದ ಹಳೆಪೇಟೆ ತಾಲ್ಲೂಕು ಕ್ರೀಡಾಂಗಣ ಜೋಳದ ಪೇಟೆ ಮುಖ್ಯ ಪೇಟೆ ರಸ್ತೆ ಈಶ್ವರ ದೇವಸ್ಥಾನ ಓಣಿ ಸಂತೆ ಮೈದಾನ ಪುರಸಭೆ ವೃತ್ತ ಹಳೆ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಯಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಸಂಚರಿಸಿತು. ಮೆರವಣಿಗೆಯಲ್ಲಿ ಭಕ್ತಿ ಗೀತೆ ಜಯಘೋಷಗಳು ಜನಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.