
ಹಾನಗಲ್: ಭೂತಪ್ಪ ದೇವಸ್ಥಾನದಲ್ಲಿ ಈ ವರ್ಷದಿಂದ ಜಾತ್ರೆ ಆರಂಭಗೊಂಡಿರುವುದು ಈ ಭಾಗದಲ್ಲಿ ಧಾರ್ಮಿಕ ವಾತಾವರಣ ಮೇಳೈಸಲು ಕಾರಣವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಾಲ್ಕರ್ ಕ್ರಾಸ್ ಸಮೀಪದ ಭೂತೇಶ್ವರ ಮತ್ತು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಜಾತ್ರೆ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಬೃಹತ್ ಮರದ ಅಡಿಯಲ್ಲಿ ದೈವಾರಾಧನೆ ನಡೆಯುತ್ತಿದ್ದ ಸ್ಥಳ ಇಂದು ನಾಡಿನ ಅಸಂಖ್ಯಾತ ಭಕ್ತರ ನಂಬಿಕೆಯ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಭೂತಪ್ಪ ದೇವಸ್ಥಾನದ ಪರಿಸರವೂ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಭೂತಪ್ಪ ಸನ್ನಿಧಿಯಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದು ಸ್ತುತ್ಯರ್ಹ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ’ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿಯಾಗಿವೆ. ಭಕ್ತಿ, ನಂಬಿಕೆ ಇದ್ದ ಸ್ಥಳ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಳ್ಳುತ್ತದೆ‘ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ರಾಜ್ಯ, ಹೊರರಾಜ್ಯದ ಭಕ್ತರು ಹರಕೆ ಹೊತ್ತು ಬರುವ ಭೂತಪ್ಪ ದೇವಸ್ಥಾನ ಸರ್ಕಾರದ ಅನುದಾನವಿಲ್ಲದೆಯೂ ಸುಧಾರಣೆಗೊಂಡಿದೆ’ ಎಂದರು.
ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೂಡಲ ಗುರು ಮಹೇಶ್ವರ ಸ್ವಾಮೀಜಿ, ಬಾಳೂರ ಅಡವಿಸ್ವಾಮಿ ಮಠದ ಕುಮಾರ ಸ್ವಾಮೀಜಿ ಭಾಗವಹಿಸಿದ್ದರು.
ದೇವಸ್ಥಾನ ಧರ್ಮದರ್ಶಿ ರಾಜಣ್ಣ ಗೌಳಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಸಿದ್ಧಲಿಂಗಣ್ಣ ಕಮಡೊಳ್ಳಿ, ರಾಘವೇಂದ್ರ ತಹಶೀಲ್ದಾರ್, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಕೃಷ್ಣ ಈಳಿಗೇರ, ಸುಭಾಸ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.