ಹಾನಗಲ್: ಪ್ರತಿ ತಿಂಗಳು ತಾಲ್ಲೂಕಿನ ಒಂದು ಗ್ರಾಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಒಂದೆಡೆ ಸೇರಿ ನಡೆಸುತ್ತಿರುವ ಗ್ರಾಮ ವಾಸ್ತವ್ಯದಿಂದ ಮುಖ್ಯವಾಗಿ ಯೋಜನೆಗಳು ಜನರನ್ನು ತಲುಪುತ್ತಿವೆ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್ ಅಭಿಪ್ರಾಯಪಟ್ಟರು.
ಶನಿವಾರ ತಾಲ್ಲೂಕಿನ ಕೂಡಲ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಸ್ವೀಕೃತಗೊಂಡ ಒಟ್ಟು 89 ಅರ್ಜಿಗಳಲ್ಲಿ 68 ಪ್ರಕರಣಗಳನ್ನು ಸ್ಥಳದಲ್ಲಿ ಇತ್ಯರ್ಥಗೊಳಿಸಿ, ಇನ್ನುಳಿದ ಪ್ರಕರಣಗಳನ್ನು ಪರಿಶೀಲನೆ ನಡೆಸಿ ಇತ್ಯರ್ಥಗೊಳಿಸಲಾಗುವುದು ಎಂದು ತಾಲ್ಲೂಕು ಆಡಳಿತ ತಿಳಿಸಿತು.
28 ಪಹಣಿ ಪತ್ರಿಕೆಗಳ ದುರಸ್ತಿಯ ಅರ್ಜಿ ಸ್ವೀಕರಿಸಿ ಸ್ಥಳದಲ್ಲಿ ಇತ್ಯರ್ಥ ಮಾಡಲಾಯಿತು, ಪಿಂಚಣಿಗಾಗಿ ಸಲ್ಲಿಕೆಯಾಗಿದ್ದ 14 ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು, 31 ಜನಕ್ಕೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು, 40 ಜನರ ಆಧಾರ ತಿದ್ದುಪಡಿ ಮಾಡಲಾಯಿತು. 40 ಜನರ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದರು.
ಕೂಡಲ-ಹರನಗಿರಿ ಅತ್ಯಂತ ಸಮೀಪದ ಸಂಪರ್ಕದ ರಸ್ತೆ ಸುಧಾರಣೆಗೆ ಸ್ಥಳೀಯರ ಬೇಡಿಕೆ ಪ್ರಕಾರ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಮತ್ತು ಕಂದಾಯ ಸಿಬ್ಬಂದಿ ಪರಿಶೀಲನೆ ಕೈಗೊಂಡರು. ಅತಿಕ್ರಮಣ, ಪೊದೆಗಳು ಬೆಳೆದ ಈ ರಸ್ತೆ ಮಾರ್ಗ ಬಳಸುವ ಸ್ಥಿತಿಯಲ್ಲಿ ಇಲ್ಲ. ಡಿ.4 ರಂದು ರಸ್ತೆ ಜಾಗೆ ಸಮೀಕ್ಷೆ ನಡೆಸಿ ಸುಧಾರಣೆ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಕೂಡಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ರತ್ನಾ ಸುರೇಶ ತಳವಾರ, ಉಪಾಧ್ಯಕ್ಷೆ ಶಾರದಾ ನಾರಾಯಣಪ್ಪ ಬಡಿಗೇರ, ಸದಸ್ಯರಾದ ಪ್ರಕಾಶ ಅಂಗಡಿ, ಗುರುನಂಜಪ್ಪ ಮಾವಿನಮರದ, ರೇಣವ್ವ ಅಂಬಿಗೇರ, ಲಲಿತಾ ಸಣ್ಣಮುದ್ದನಗೌಡ್ರ, ಶಿಲ್ಪಾ ಹರಿಜನ, ಶಂಕ್ರಪ್ಪ ಗದ್ದಿ, ಸೋಮಶೇಖರ ಹೊಸಪೇಟೆ, ಕಮಲವ್ವ ತಳವಾರ, ಪಿಡಿಒ ಸಂಜೀವ ಕುಂದೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.