ಹಾನಗಲ್ ಜನರು
ಹಾನಗಲ್: ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು, ಪ್ರವಾಸಕ್ಕೆ ತೆರಳಿರುವ ಹಾನಗಲ್ನ 27 ಜನರು ಜಮ್ಮುವಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಕುಟುಂಬದ ಸದಸ್ಯರು ಆತಂಕದಲ್ಲಿದ್ದಾರೆ.
‘ಜಮ್ಮುವಿನ ಕಾಟ್ರಾ ವೈಷ್ಣೋದೇವಿ ದೇವಸ್ಥಾನದಲ್ಲಿ ಹಾನಗಲ್ ಪ್ರವಾಸಿಗರು ಇದ್ದಾರೆ’ ಎಂದು ಕುಟುಂಬದವರು ತಿಳಿಸಿದ್ದಾರೆ. ಶಿವಮೊಗ್ಗದ ಏಜೆನ್ಸಿಯೊಂದರ ಮೂಲಕ ಅವರು ಏಪ್ರಿಲ್ 17ರಂದು ಹಾನಗಲ್ನಿಂದ ಜಮ್ಮು–ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.
ಏ. 22ರಂದು ಮಂಗಳವಾರ ಬೆಳಿಗ್ಗೆ ಬಸ್ ಮೂಲಕ ಅಮೃತಸರದಿಂದ ಜಮ್ಮುವಿಗೆ ಪ್ರಯಾಣಿಸಿದ್ದ ಪ್ರವಾಸಿಗರು, ಬುಧವಾರ (ಏಪ್ರಿಲ್ 23) ಪಹಲ್ಗಾಮ್ ಭೇಟಿ ಮಾಡುವ ಕಾರ್ಯಕ್ರಮವಿತ್ತು. ಉಗ್ರರ ದಾಳಿಯ ಸುದ್ದಿ ತಿಳಿದು, ಕಾಟ್ರಾ ವೈಷ್ಣೋದೇವಿ ದೇವಸ್ಥಾನದಲ್ಲಿಯೇ ಹಾನಗಲ್ ಜನರು ಉಳಿದುಕೊಂಡಿರುವುದಾಗಿ ಗೊತ್ತಾಗಿದೆ.
ಹಾನಗಲ್ ನಿವಾಸಿಗಳಾದ ರುದ್ರಗೌಡ ಪಿ., ಮನೋಹರ ಬಳಿಗಾರ, ಸುರೇಶ ಸಿಂಧೂರ, ಜಾಧವ, ಉಪ್ಪಿನ್, ಶಂಕರ ಹಾದಿಮನಿ, ಕುಮಾರ ಹತ್ತಿಕಾಳ, ನಾಗರಾಜ ಮಿರ್ಜಿ, ಕೆರೆಸ್ವಾಮಿ ಕೆ.ಪಿ., ವಿರೇಶ ಕುಟುಂಬದವರು ಪ್ರವಾಸಕ್ಕೆ ತೆರಳಿದ್ದಾರೆ.
‘ಮಂಗಳವಾರ ಮಧ್ಯಾಹ್ನ ಪೋನ್ ಆನ್ ಇತ್ತು. ಆ ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಏಜೆನ್ಸಿಯ ವ್ಯವಸ್ಥಾಪಕರು, ಸಂಪರ್ಕದಲ್ಲಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಲಾಗಿದೆ’ ಎಂದು ಕೆರೆಸ್ವಾಮಿ ಪುತ್ರ ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.
ಏ. 27ರ ತನಕ ಪ್ರವಾಸ ಮುಂದುವರೆಯಬೇಕಿತ್ತು. ಅದಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಪ್ರವಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.