ಹಾವೇರಿ: ಲಾಕ್ಡೌನ್ ಅವಧಿಯಲ್ಲಿ ನಷ್ಟಗೊಂಡ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡಲು ಅರ್ಜಿ ಸಲ್ಲಿಸಿದ ರೈತರನ್ನು ಬಿಟ್ಟು, ಹಿಂದಿನ ವರ್ಷದ ಬೆಳೆ ಸಮೀಕ್ಷೆ ಆಧಾರದ ಮೇಲೆ ಪರಿಹಾರ ವಿತರಣೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಉತ್ತರ ಕರ್ನಾಟಕ ರೈತ ಸಂಘದ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ ಆರೋಪಿಸಿದ್ದಾರೆ.
ನಷ್ಟ ಅನುಭವಿಸಿದ ಸಾವಿರಾರು ರೈತರಿಗೆ ಅನ್ಯಾಯವಾಗುತ್ತಿದ್ದು, ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ಬೆಳೆ ಆಧಾರದ ಮೇಲೆ ಪರಿಹಾರ ನೀಡಬೇಕು.ಹಣ್ಣು, ತರಕಾರಿ, ಮೆಣಸಿನಕಾಯಿ ಸೇರಿದಂತೆ ಇತರೆ ಅಲ್ಪಾವಧಿ ಬೆಳೆಗಳಿಗೆ ಬೆಲೆ ಸಿಗದೇ ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯ ರೈತರು ನಷ್ಟ ಅನುಭವಿಸಿದ್ದಾರೆ. ತಾರತಮ್ಯ ನೀತಿಯನ್ನು ತಕ್ಷಣವೇ ನೀಲ್ಲಿಸಬೇಕು. ಹಾನಿಯೊಳಗಾದ ಎಲ್ಲಾ ರೈತರ ಬೆಳೆಗಳಿಗೆ ಕಡ್ಡಾಯವಾಗಿ ಯೋಗ್ಯ ಪರಿಹಾರ ನೀಡಬೇಕು. ಸರಿಪಡಿಸದೇ ಹೋದರೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ತೋಟಗಾರಿಕೆ ಸಹಾಯಕ ನಿರ್ದೇಶಕ ವಿಶ್ವನಾಥ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.ನಾಗಪ್ಪ ರಾಮಜ್ಜನವರ, ಬಸವರಾಜ ಬುಳ್ಳಮ್ಮನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.