ADVERTISEMENT

ರಾಣೆಬೆನ್ನೂರು: ಹದಗೆಟ್ಟ ಚಿಕ್ಕಕುರುವತ್ತಿ-ಗುತ್ತಲ ರಸ್ತೆ

ಕೃಷಿ ಬೆಳೆಗಳ ಮೇಲೂ ಹರಡಿದ ದೂಳು

ಮುಕ್ತೇಶ ಕೂರಗುಂದಮಠ
Published 21 ಡಿಸೆಂಬರ್ 2024, 4:49 IST
Last Updated 21 ಡಿಸೆಂಬರ್ 2024, 4:49 IST
ರಾಣೆಬೆನ್ನೂರು ತಾಲ್ಲೂಕಿನ ಚಿಕ್ಕಕುರುವತ್ತಿ ಗ್ರಾಮದಿಂದ ಗುತ್ತಲಕ್ಕೆ ರ್ಮಾಗದ ರಸ್ತೆಯು ಸಂಪೂರ್ಣ ಹದಗೆಟ್ಟಿದೆ
ರಾಣೆಬೆನ್ನೂರು ತಾಲ್ಲೂಕಿನ ಚಿಕ್ಕಕುರುವತ್ತಿ ಗ್ರಾಮದಿಂದ ಗುತ್ತಲಕ್ಕೆ ರ್ಮಾಗದ ರಸ್ತೆಯು ಸಂಪೂರ್ಣ ಹದಗೆಟ್ಟಿದೆ   

ರಾಣೆಬೆನ್ನೂರು: ತಾಲ್ಲೂಕಿನ ಚಿಕ್ಕಕುರುವತ್ತಿ ಗ್ರಾಮದಿಂದ ಗುತ್ತಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 4.5 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ರಸ್ತೆಯುದ್ದಕ್ಕೂ ತಗ್ಗುಗುಂಡಿಗಳು ನಿರ್ಮಾಣವಾಗಿದ್ದು ಅಪಾಯ ಆಹ್ವಾನಿಸುತ್ತಿವೆ. ವಾಹನ ಸಂಚಾರ ಸಂಕಷ್ಟಮಯವಾಗಿದೆ. ವಿಸ್ತಾರವಾದ ಹೊಂಡಗಳಲ್ಲಿ ಬೈಕ್‌ ಮತ್ತು ಸೈಕಲ್‌ ಸವಾರರು ಮಗುಚಿ ಬಿದ್ದು, ಗಾಯ ಮಾಡಿಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿವೆ.

ಈ ರಸ್ತೆಗೆ ಹೊಂದಿಕೊಂಡ ಜಮೀನಿನ ಬೆಳೆಗಳ ಮೇಲೂ ದೂಳು ಆವರಿಸಿಕೊಳ್ಳುತ್ತಿದೆ. ಈ ಮಾರ್ಗದಲ್ಲಿ ಭಾರಿ ಪ್ರಮಾಣದ ಭಾರ ಹೊತ್ತು ಲಾರಿಗಳು ಸಂಚರಿಸುವುದರಿಂದ ಯಾವಾಗಲೂ ದೂಳುಮಯ ವಾತಾವರಣ ಕಂಡು ಬರುತ್ತದೆ.

ADVERTISEMENT

ತಾಲ್ಲೂಕಿನ ಚಿಕ್ಕಕುರುವತ್ತಿ ಗ್ರಾಮ ತುಂಗಭದ್ರಾ ನದಿ ತೀರದ ಪ್ರದೇಶಕ್ಕೆ ಹೊಂದಿಕೊಂಡಿದೆ. ತುಂಗಭದ್ರಾ ನದಿ ತೀರದಿಂದ ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಇದೇ ರಸ್ತೆ ಮೂಲಕ ಮರಳು ತುಂಬಿದ ಟಿಪ್ಪರ್‌ ಲಾರಿ ಸೇರಿದಂತೆ ಹತ್ತಾರು ಗಾಲಿಗಳ ಭಾರಿ ವಾಹನಗಳು ಸಂಚರಿಸುತ್ತವೆ.

ಶಾಲಾ ಕಾಲೇಜು ವಿದ್ಯಾರ್ಥಿಗಳು , ನೌಕರರು, ಸಾರ್ವಜನಿಕರು ಹಿಡಿಶಾಪ ಹಾಕಿ ಸಂಚರಿಸಬೇಕಾಗಿದೆ. ಬಹಳ ವರ್ಷಗಳ ಹಿಂದೆ ರಸ್ತೆ ಡಾಂಬರೀಕಣ ಮಾಡಲಾಗಿತ್ತು. ಅದು ಕಿತ್ತುಹೋಗಿವೆ. ಮರಳು ಅಕ್ರಮವಾಗಿ ಸಾಗಿಸುವ ಪ್ರಮುಖ ಮಾರ್ಗವೂ ಇದಾಗಿದ್ದು ರಸ್ತೆ ಹಾಳಾಗುವುದಕ್ಕೆ ಟಿಪ್ಪರ್‌, ಲಾರಿಗಳು ಕಾರಣವಾಗಿವೆ.

‘ತುರ್ತು ಸಂದರ್ಭದಲ್ಲಿ ಯಾರಾದರೂ ಗರ್ಭಿಣಿಯರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು 108 ಅಥವಾ ಅಂಬುಲ್ಯೆನ್ಸ್ ಕರೆ ಮಾಡಿದರೆ ಅಂಬ್ಯುಲೆನ್ಸ್‌ ಬರುವಷ್ಟರಲ್ಲಿ ಹೆರಿಗೆಯಾಗುವಂತಾಗಿದೆ.
ಚಿಕ್ಕಕುರವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 5 ಗ್ರಾಮಗಳು ಒಳಪಡುತ್ತವೆ. ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟರೂ ಈ ಭಾಗದ ಚುನಾಯಿತ ಪ್ರತಿನಿಧಿಗಳು ರಸ್ತೆ ದುರಸ್ಥಿಗೆ ಮುಂದಾಗಿಲ್ಲ. ಈ ಬಗ್ಗೆ ಶಾಸಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೂ ತಂದರೂ ಏನೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಮಲ್ಲಣ್ಣ ಮಾಸಣಗಿ.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹನ ಮಗುಚಿ ಬಿದ್ದು ಸಂಕಷ್ಟ ಅನುಭವಿಸಿದ್ದಾರೆ. ಐದು ಕಿಲೋ ಮೀಟರ್‌ ರಸ್ತೆಯಲ್ಲಿ ಸಂಚರಿಸುವುದು ಸಾಹಸವಾಗಿ ಮಾರ್ಪಟ್ಟಿದೆ. ಜನರು ನೆಮ್ಮದಿಯಿಂದ ಸಂಚರಿಸುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಈ ಭಾಗದ ರೈತರ ಒತ್ತಾಯ.

ರಾಣೆಬೆನ್ನೂರು ತಾಲ್ಲೂಕಿನ ಚಿಕ್ಕಕುರುವತ್ತಿ ಗ್ರಾಮದಿಂದ ಗುತ್ತಲಕ್ಕೆ ತೆರಳುವ ರಸ್ತೆ ಹದಗೆಟ್ಟು ತೆಗ್ಗುಗುಂಡಿಗಳಿಂದ ಕೂಡಿದೆ
ಚಿಕ್ಕಕುರುವತ್ತಿಯಿಂದ ಗುತ್ತಲ ಸಂಪರ್ಕದ ರಸ್ತೆ ದುರಸ್ಥಿಗೆ ಕ್ರಿಯಾಯೋಜನೆಗೆ ಅನುಮೋದನೆ ಬಂದಿದೆ. ಎರಡು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಮುಗಿಸಿ ನಂತರ ಕಾಮಗಾರಿ ಕೈಗೊಳ್ಳಲಾಗುವುದು
ಸುಹಾಸ ಕೆ. ಲೊಕೋಪಯೋಗಿ ಇಲಾಖೆ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.