ಸವಣೂರ: ಕಲ್ಯಾಣಿ ಚಾಲುಕ್ಯರ ಒಂದನೇ ಸೋಮೇಶ್ವರನಿಗೆ ಸೇರಿದ್ದ ಎನ್ನಲಾದ 1067 ಶಾಸನದಲ್ಲಿ ಚಿಲ್ಲೂರಬಡ್ನಿ ಗ್ರಾಮದ ಉಲ್ಲೇಖವಿದ್ದು, ಐತಿಹಾಸಿಕ ಮಹತ್ವವನ್ನು ತಿಳಿಸುತ್ತದೆ.
ಶಾನುಭೋಗರ ಕುಡಿಯುವ ನೀರಿನ ಬಾವಿ ಬಳಿ ಈ ಶಾಸನವಿದೆ.ಈ ಗ್ರಾಮದ ನಾಯಿಮ್ಮನು ರಾಮೇಶ್ವರ ದೇವಾಲಯ ನಿರ್ಮಾಣ ಮಾಡಿರುವುದನ್ನುಉಲ್ಲೇಖಿಸುತ್ತದೆ. ಇವೆಲ್ಲವೂ ಪ್ರಾಚೀನಕಾಲದ್ದಾಗಿದ್ದು, ಇದರಲ್ಲಿ ಒಂದು ಗ್ರಾಮದ ಹೊರಗಡೆ ಇರುವ ಶಾನುಭೋಗರ ಬಾವಿಯ ಹತ್ತಿರ ಕಲ್ಮೇಶ್ವರ ದೇವಾಲಯವಿದೆ. ಕಲ್ಯಾಣಿ ಚಾಲುಕ್ಯರ ಶೈಲಿಯಲ್ಲಿರುವಈ ದೇವಸ್ಥಾನ ಕ್ರಿ.ಶ 11ನೇ ಶತಮಾನಕ್ಕೆಸೇರಿದ್ದು ಎನ್ನಲಾಗುತ್ತಿದೆ.
ಲಿಂಗ, ನಂದಿ, ಸಪ್ತಮಾತೃಕೆಫಲಕ ಹಾಗೂ ವಿಷ್ಣು ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿಯ ಶಾಸನದ ಪ್ರಕಾರ ರಾಮಲಿಂಗೇಶ್ವರ ದೇವಾಲಯವಾಗಿದ್ದು, ಊರಿನ ಒಡೆಯ ನಾಯಿಮ್ಮನು ಕ್ರಿ.ಶ 1062ರ ಆಸುಪಾಸಿನಲ್ಲಿ ಇದನ್ನು ನಿರ್ಮಿಸಿದ್ದನು ಎಂಬುದು ‘ಕರ್ನಾಟಕ ಗ್ರಾಮ ಚರಿತ್ರೆ’ ಪುಸ್ತಕದಿಂದ ತಿಳಿದು ಬರುತ್ತದೆ.
ಹೊಸ ದೇವಸ್ಥಾನ ನಿರ್ಮಾಣ
ಈ ದೇವಾಲಯದಲ್ಲಿದ್ದ ರಾಮೇಶ್ವರ ಲಿಂಗವನ್ನು ಗ್ರಾಮಸ್ಥರು ಊರೊಳಗೆ ಸಾಗಿಸಿ ಹೊಸ ರಾಮಲಿಂಗೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿ ಪೂಜಿಸುತ್ತಿದ್ದಾರೆ. ಬರಿದಾದ ಕಲ್ಮೇಶ್ವರ ದೇವಸ್ಥಾನದಲ್ಲಿ ಈಗ ಸರಳ ರಚನೆಯ ಲಿಂಗವೊಂದನ್ನಿಟ್ಟು ಪೂಜಿಸುತ್ತಿದ್ದಾರೆ. ಶಂಕರಲಿಂಗೇಶ್ವರ ದೇವಾಲಯ ಗ್ರಾಮದ ದಕ್ಷಿಣ ಭಾಗದಲ್ಲಿದ್ದು, ಇತ್ತೀಚೆಗೆನವೀಕರಣಗೊಂಡಿದೆ. ಈ ದೇವಸ್ಥಾನದಲ್ಲಿರುವ ಲಿಂಗವು ಕಲ್ಯಾಣಿ ಚಾಲುಕ್ಯರ ಕಾಲದ್ದಾಗಿದ್ದು, ಲಿಂಗದ ಎದುರಿಗೆ ನಾಗಶಿಲ್ಪವಿದೆ ಎಂದು ಚನ್ನಪ್ಪ ಕುಂಬಾರ ತಿಳಿಸಿದರು.
ತಾಲ್ಲೂಕು ಕೇಂದ್ರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಗ್ರಾಮವೇ ಚಿಲ್ಲೂರಬಡ್ನಿ. ಈ ಗ್ರಾಮದ ಹಿರಿಯರು ಹಾಗೂ ಕಲಾವಿದರಾದ ಲಿಂಗಾಭಟ್ಟ ಜೋಶಿ ಅವರು ಹಾವೇರಿ ಜಿಲ್ಲೆಯ 3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅಲ್ಲದೆ, ಗ್ರಾಮದಲ್ಲಿ ದೊಡ್ಡಾಟ,ಭಜನೆ, ಸೋಬಾನೆ ಪದಗಳನ್ನು ಹೇಳುವ ಕಲಾವಿದರು, ನಾಟಕಕಾರರು, ಹೆಜ್ಜೆ ಮೇಳದ ಕಲಾವಿದರು ಈ ಗ್ರಾಮದಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದುಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಮೇಟಿ ತಿಳಿಸಿದರು.
ಗ್ರಾಮದಲ್ಲಿ ಮಾರುತಿ, ದ್ಯಾಮವ್ವ, ದುರ್ಗವ್ವ ದೇವಾಲಯಗಳು ಹಿಂದಿನ ಕಾಲದ್ದಾಗಿದೆ. ಜುಮ್ಮಾ ಮಸೀದಿಯು ಈ ಗ್ರಾಮದಲ್ಲಿ ಕಂಡು ಬರುವುದರಿಂದ ಹಿಂದೂ ಮುಸ್ಲಿಂ ಭಾವೈಕ್ಯ ಸಂಕೇತವನ್ನು ಸಾರುತ್ತದೆ. ಅಲ್ಲದೆ, ಇಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾದ ಸರ್ಕಾರಿ ಶಾಲೆಯೂ ಇದೆ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.