ADVERTISEMENT

ಮನೆ ಹಾನಿ: ಪರಿಷ್ಕೃತ ಪರಿಹಾರ, ಬಿ ವರ್ಗದ ಮನೆ ದುರಸ್ತಿಗೆ ₹3 ಲಕ್ಷ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 15:54 IST
Last Updated 21 ಜನವರಿ 2020, 15:54 IST
ಕೃಷ್ಣ ಬಾಜಪೇಯಿ
ಕೃಷ್ಣ ಬಾಜಪೇಯಿ   

ಹಾವೇರಿ: ನೆರೆ ಸಂತ್ರಸ್ತರ ಮನವಿಯಂತೆ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ‘ಬಿ’ ವರ್ಗದ ಮನೆಗಳ ದುರಸ್ತಿಗೆ ಪರಿಹಾರ ನೀಡುವ ಮಾನದಂಡವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಎ ಮತ್ತು ಬಿ ವರ್ಗದ ಮನೆಗಳನ್ನು ಪೂರ್ಣ ಕೆಡವಿ ಪುನರ್ ನಿರ್ಮಾಣ ಮಾಡುವುದಾದರೆ ₹5 ಲಕ್ಷ ಪರಿಹಾರ ಹಾಗೂ ಬಿ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವದೆ ದುರಸ್ತಿ ಮಾಡಿಕೊಳ್ಳುವುದಾದರೆ ₹3 ಲಕ್ಷ ಪರಿಹಾರ ಪಾವತಿಸಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಭಾಗಶಃ ಹಾನಿಗೊಳಗಾದ ಮನೆಗಳನ್ನು ಪೂರ್ಣ ನೆಲಸಮ ಮಾಡಿ ತಳಪಾಯ ಹಂತದಿಂದಲೇ ನಿರ್ಮಿಸಬೇಕಾದಲ್ಲಿ ₹5 ಲಕ್ಷ ಅನುದಾನ ಸಾಕಾಗುವುದಿಲ್ಲ. ಇದಕ್ಕೆ ₹10 ಲಕ್ಷದಿಂದ ₹20 ಲಕ್ಷ ಅನುದಾನ ಬೇಕಾಗುತ್ತದೆ. ಈ ಕಾರಣದಿಂದ ಹಾನಿಗೊಳಗಾದ ಭಾಗವನ್ನು ಮಾತ್ರ ಪುನರ್ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂಬ ಕೆಲವು ಫಲಾನುಭವಿಗಳು ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸಿದ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ADVERTISEMENT

ಹೊಸ ಮಾರ್ಗಸೂಚಿಯಂತೆ ‘ಎ’ ಮತ್ತು ‘ಬಿ’ ವರ್ಗದ ಮನೆಗಳನ್ನು ಪೂರ್ಣವಾಗಿ ಕೆಡವಿ ಹಾಗೂ ಪುನರ್ ನಿರ್ಮಾಣ ಮಾಡುವಂತಹ ಮನೆಗಳಿಗೆ ₹5 ಲಕ್ಷ ಪರಿಹಾರವನ್ನು ನಾಲ್ಕು ಹಂತವಾರು (ತಳಪಾಯ, ಕಿಟಕಿ, ಚಾವಣಿ ಮತ್ತು ಪೂರ್ಣ) ಫೋಟೋಗಳನ್ನು ಕಡ್ಡಾಯವಾಗಿ ಜಿಪಿಎಸ್ ಮುಖಾಂತರ ಅಳವಡಿಸಿದ ನಂತರ ಪಾವತಿಸಲಾಗುವುದು. ಭಾಗಶಃ ಹಾನಿಗೀಡಾದ ಮನೆಗಳಿಗೆ ದುರಸ್ತಿ ಕಾರ್ಯ ಇತ್ಯಾದಿಗಳನ್ನು ಕೈಗೊಳ್ಳುವ ಸಲುವಾಗಿ ₹3 ಲಕ್ಷ ಪರಿಹಾರವನ್ನು ಎರಡು ಹಂತಗಳಲ್ಲಿ ಪಾವತಿಸಲಾಗುವುದು.
‘ಸಿ’ ವರ್ಗದ ಮನೆಗಳ ಪರಿಹಾರದ ಮೊತ್ತ ₹50 ಸಾವಿರಗಳಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.