ಹಾವೇರಿ: ಜೀವನ ಸರಳ ಪಾಲಿಸಿಯ ಪ್ರೀಮಿಯಂ ವ್ಯತ್ಯಾಸದ ಮೊತ್ತ ಪಾವತಿಗೆ ಎಲ್.ಐ.ಸಿ.ಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಜಿಲ್ಲೆಯ ಹಾನಗಲ್ ನಿವಾಸಿ ಸುಧೀಂದ್ರ ಶ್ರೀನಿವಾಸರಾವ್ ಗಾಜಿಪುರ ಅವರು ಎಲ್ಐಸಿ ಏಜೆಂಟರಾದ ಮುಕ್ತಾ ಮುರಳೀಧರ ಕಾಮನಹಳ್ಳಿ ಅವರ ಹತ್ತಿರ ದಿನಾಂಕ 2011ರಂದು ₹1 ಲಕ್ಷ ಮೊತ್ತದ ಜೀವನ ಸರಳ ಪಾಲಿಸಿ ಮಾಡಿದ್ದರು. 2021ರವರೆಗೆ ₹48 ಸಾವಿರ ವಿಮಾ ಕಂತು ಪಾವತಿಸಿದ್ದಾರೆ. ಹತ್ತು ವರ್ಷಗಳ ನಂತರ ಪಾಲಿಸಿ ಅವಧಿ ಮುಗಿದ ನಂತರ ಕೇವಲ ₹36,290 ಮಾತ್ರ ನೀಡಿದ್ದಾರೆ.
ಎಲ್.ಐ.ಸಿ. ಕಚೇರಿಯಲ್ಲಿ ವಿಚಾರಿಸಿದಾಗ ಅಸಭ್ಯವಾಗಿ ವರ್ತಿಸಿದ ಕಾರಣ ಪಾಲಿಸಿ ವ್ಯತ್ಯಾಸದ ಮೊತ್ತ ₹63,910 ಗಳ ಪಾವತಿಗಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯರು ಹಾಗೂ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಹಾಗೂ ಸದಸ್ಯೆ ಉಮಾದೇವಿ ಎಸ್.ಹಿರೇಮಠ ಅವರು ಪ್ರೀಮಿಯಂ ಮೊತ್ತದ ವ್ಯತ್ಯಾಸದ ₹63,910ಗಳನ್ನು ಶೇ 6ರಂತೆ ಬಡ್ಡಿ ಸಹಿತ 30 ದಿನದೊಳಗಾಗಿ ನೀಡಲು ಹಾಗೂ ಮಾನಸಿಕ ಹಾಗೂ ದೈಹಿಕ ವ್ಯಥೆಗೆ ₹2 ಸಾವಿರ ಪ್ರಕರಣದ ಖರ್ಚು ₹2 ಸಾವಿರಗಳನ್ನು ಪಾವತಿಸಲು ಎಲ್.ಐ.ಸಿ.ಗೆ ಆದೇಶಿಸಿದ್ದಾರೆ.
ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.