ಮೌನೇಶ್ ಬಡಿಗೇರ
ಹಾವೇರಿ: ಶಿಕ್ಷಕರೊಬ್ಬರ ಅಮಾನತು ಆದೇಶ ಹಿಂಪಡೆಯಲು ₹ 50 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಹಾವೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೊಂದ ಶಿಕ್ಷಕ ನೀಡಿದ್ದ ದೂರು ಆಧರಿಸಿ ಶನಿವಾರ ಕಾರ್ಯಾಚರಣೆ ನಡೆಸಿದ್ದ ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರ ತಂಡ, ಮೌನೇಶ್ ಅವರನ್ನು ಬಲೆಗೆ ಬೀಳಿಸಿದೆ. ಮೌನೇಶ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ವಶಕ್ಕೆ ಪಡೆದಿದೆ.
‘ಆರೋಪಿ ಮೌನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಶಿಕ್ಷಕರೊಬ್ಬರ ಅಮಾನತು ಆಗಿತ್ತು. ಅಮಾನತು ಆದೇಶ ಹಿಂಪಡೆಯುವಂತೆ ಶಿಕ್ಷಕರು ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ್ದ ಮೌನೇಶ್, ₹ 50 ಸಾವಿರ ಕೊಟ್ಟರೆ ಆದೇಶ ಹಿಂಪಡೆಯುವುದಾಗಿ ಹೇಳಿದ್ದರು’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.
‘ನೊಂದ ಶಿಕ್ಷಕ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬಸವೇಶ್ವರನಗರದ 13ನೇ ಕ್ರಾಸ್ನಲ್ಲಿರುವ ಮನೆಗೆ ಹೋಗಿದ್ದ ದೂರುದಾರ ಶಿಕ್ಷಕ, ಮುಂಗಡವಾಗಿ ₹ 15 ಸಾವಿರ ನೀಡಿದ್ದರು. ಮೌನೇಶ್ ಅವರನ್ನು ಹಣ ಪಡೆಯುತ್ತಿದ್ದಂತೆ ಮನೆಗೆ ಹೋಗಿ ವಶಕ್ಕೆ ಪಡೆಯಲಾಗಿದೆ. ಕಾನೂನು ಪ್ರಕ್ರಿಯೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.