ಹಾವೇರಿ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಜಿಲ್ಲೆಯಾದ್ಯಂತ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿದ್ದ ಮನೆ ಹಾಗೂ ಶಾಲೆಗಳಲ್ಲಿ ಜನ್ಮಾಷ್ಟಮಿ ಆಚರಣೆ ವಿಶೇಷವಾಗಿತ್ತು.
ನಗರದ ಹಲವು ಮನೆಗಳಲ್ಲಿ ಪೋಷಕರು, ತಮ್ಮ ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ವೇಷಭೂಷಣ ತೊಡಿಸಿ ಸಂಭ್ರಮಿಸಿದರು. ಮಕ್ಕಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಸಂಬಂಧಿಕರಿಗೂ ಫೋಟೊ–ವಿಡಿಯೊ ಕಳುಹಿಸಿ ಮೆಚ್ಚುಗೆ ಪಡೆದುಕೊಂಡರು.
ವೇಷಕ್ಕೆ ತಕ್ಕಂತೆ ಬಟ್ಟೆ ತೊಟ್ಟಿದ್ದ ಮಕ್ಕಳು, ಕೃಷ್ಣ–ರಾಧೆಯರಾಗಿ ಓಡಾಡಿದರು. ಬೆಣ್ಣೆ ಹಾಗೂ ಕೊಳಲು ಹಿಡಿದು ರೂಪಕ ಪ್ರದರ್ಶಿಸಿದರು.
ವಿವಿಧ ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆಗಳು ನಡೆದವು. ಶಾಲೆಗಳಲ್ಲಿ ವಿದ್ಯಾರ್ಥಿಗಳು, ಕೃಷ್ಣ–ರಾಧೆ ವೇಷದಲ್ಲಿ ವಿಶೇಷ ಪ್ರದರ್ಶನ ನೀಡಿದರು.
‘ಜಯ ಜನಾರ್ದನಾ ಕೃಷ್ಣ....’ ಹಾಗೂ ‘ಕೃಷ್ಣ ಬೇಗನೇ ಬಾರೋ...’ ಎಂಬ ಹಲವು ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿದರು. ಅನನ್ಯಾ ಇಂಟರನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕೃಷ್ಣ ಜನ್ಮಾಷ್ಟಮಿ ಜರುಗಿತು.
ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾನಗಲ್, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂದಗೋಪಾಲನ ವೇಷದಲ್ಲಿ ಗಮನ ಸೆಳೆದ ಚಿಣ್ಣರು
ತಿಳವಳ್ಳಿ: ಇಲ್ಲಿಯ ಕನ್ನಡ ಗಂಡು ಮಕ್ಕಳ ಸರ್ಕಾರಿ ಮಾದರಿ ಶಾಲೆಯಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲಾ ಮಕ್ಕಳು ಶ್ರೀಕೃಷ್ಣ ರಾಧೆ ರುಕ್ಮಿಣಿಯರ ವೇಷಭೂಷಣ ಧರಿಸಿ ನೆರೆದಿದ್ದವರ ಮನ ಸೆಳೆದರು. ಕಾರ್ಯಕ್ರಮದಲ್ಲಿ ಶಾಲೆಯ ಹಲವಾರು ಮಕ್ಕಳು ಕೃಷ್ಣ ರಾಧೆ ಮತ್ತು ರುಕ್ಮಣಿ ವೇಷ ಧರಿಸಿ ಕೃಷ್ಣನ ರೂಪಕಕ್ಕೆ ಪೂರಕವಾಗಿ ಅಭಿನಯಿಸಿದರು. ಶಾಲಾ ಮೂಖ್ಯ ಶಿಕ್ಷಕ ಯೋಗೇಂದ್ರ ಆಚಾರ್ಯ ಮಾತನಾಡಿ ಮಕ್ಕಳಿಗೆ ಪಠ್ಯಕ್ಕಿಂತ ಹೆಚ್ಚಾಗಿ ಜೀವನ ಕೌಶಲದ ಪಾಠ ಹೇಳಿಕೊಡುವ ಅಗತ್ಯವಿದೆ. ಅಂಕ ಗಳಿಕೆಗಿಂತ ಸ್ವಾವಲಂಬಿ ಜೀವನ ಹೇಗೆ ಸಾಗಿಸಬಹುದು ಎಂಬುದನ್ನು ಪಾಲಕರು ತಿಳಿ ಹೇಳಿಕೊಡಬೇಕು. ಶಿಕ್ಷಕರು ಹಾಗೂ ಪಾಲಕರು ನಡುವೆ ಅನ್ಯೋನ್ಯತೆ ಇದ್ದರೆ ಶಾಲಾ ಶಿಕ್ಷಣದ ಗುಣಮಟ್ಟ ತನ್ನಿಂತಾನೇ ಸುಧಾರಣೆಯಾಗುತ್ತದೆ ಎಂದು ಹೇಳಿದರು. ಶಿಕ್ಷಕಿ ಅನ್ನಪೂರ್ಣ ಎಸ್ ಉಮಾದೇವಿ ಎಂ.ಎನ್ ಸುಧಾ ಹುಲ್ಲತ್ತಿ ವಿದ್ಯಾ ಪವಾರ ಗಾಯತ್ರಿ ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.