
ಹಾವೇರಿ: ‘ಕೇಂದ್ರ ಸರ್ಕಾರವು 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರು ಸೇರಿದ್ದ ಸಂಘದ ಪದಾಧಿಕಾರಿಗಳು, ಘೋಷಣಾ ಫಲಕ ಪ್ರದರ್ಶಿಸಿದರು.
‘ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣ ಮಾಡುತ್ತಿರುವುದರಿಂದ, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರವಿದು. ದಿನಕ್ಕೆ 12 ತಾಸು ಕೆಲಸದ ಅವಧಿ ಹೆಚ್ಚಿಸಿರುವುದು ಮತ್ತು ಮಹಿಳಾ ಉದ್ಯೋಗಿಗಳನ್ನು ರಾತ್ರಿ ಪಾಳಿಯಲ್ಲೂ ದುಡಿಸಿಕೊಳ್ಳುವುದು ಸಂಹಿತೆಯಲ್ಲಿದೆ. ಇದು ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ’ ಎಂದು ಪ್ರತಿಭಟನಕಾರರ ದೂರಿದರು.
‘ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರ ಸ್ಥಾನಮಾನ ನೀಡದೇ, ಕನಿಷ್ಠ ವೇತನ ಮತ್ತು ಪಿಎಫ್, ಇಎಸ್ಐ, ನಿವೃತ್ತಿ ಪರಿಹಾರಗಳನ್ನು ಒದಗಿಸದೇ ಶೋಷಿಸಲಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.
ರತ್ನಾ ಗಿರಣಿ, ಮಧುಲತಾ, ನೀಲಾ ಕಳ್ಳಿಮನಿ, ಬಸಮ್ಮ ಬಸ್ತಿ, ಸವಿತಾ ಬಾತಿ, ರೇಣುಕಾ ಸಣ್ಣವೀರಮಠ, ಎಸ್.ಎಸ್. ಪಾಟೀಲ, ಮಂಜುಳಾ ನೆಗಳೂರ, ಈರಮ್ಮ ಎಸ್.ಸಿ., ಶಾಂತವ್ವ ಕಾಯಕದ, ನಾಗವೇಣಿ ತಾಂದಳೆ, ವಿಜಯಲಕ್ಷ್ಮಿ ಶೆಟ್ಟರ್, ಸುಧಾ ತಳಗೇರಿ, ಬಸವರಾಜ ಪೂಜಾರ, ರಾಜೇಶ್ವರಿ ಹಿರೇಮಠ, ಬಸವರಾಜ ಎಸ್., ಜಗದೀಶ್ ಕೋಟಿ, ಚೈತ್ರಾ ಎಸ್.ಕೆ., ಶಾಂತಾ ಗಡ್ಡಿಯವರ, ಸಿದ್ದಮ್ಮ ಚೌಟಿ, ರಿಯಾಜ್ಅಹಮದ್ ಮರಫಾಜೆ, ಹಬೀಬ್ ಮುಲ್ಲಾ, ದಾದಾಪೀರ್ ತಿಳವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.