ಹಾವೇರಿ: ಜಿಲ್ಲೆಯ ಸವಣೂರ ತಾಲ್ಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿರುವ ಉಡಚಮ್ಮದೇವಿಯ ರಥೋತ್ಸವವು ಗುರುವಾರ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಮಹಿಳೆಯರಷ್ಟೇ ರಥ ಎಳೆದಿದ್ದು ವಿಶೇಷವಾಗಿತ್ತು.
ದೇವಿಯ ರಥೋತ್ಸವಕ್ಕೆಂದು ಮಹಿಳೆಯರೇ ಸುಮಾರು ₹ 10 ಲಕ್ಷ ದೇಣಿಗೆ ಸಂಗ್ರಹಿಸಿ ರಥ ನಿರ್ಮಾಣ ಮಾಡಿಸಿದ್ದರು. ವಿಜಯದಶಮಿ ದಿನವಾದ ಗುರುವಾರ ರಥದ ಲೋಕಾರ್ಪಣೆ ಜೊತೆಯಲ್ಲಿ, ಉಡಚಮ್ಮದೇವಿಯ ಭವ್ಯ ರಥೋತ್ಸವವೂ ಅದ್ಧೂರಿಯಾಗಿ ನಡೆಯಿತು.
ಗ್ರಾಮದೇವತೆ ಉಡಚಮ್ಮದೇವಿಯ ದೇವಸ್ಥಾನ ಆವರಣದಲ್ಲಿ ಪ್ರತಿವರ್ಷವೂ ದೇವಿಯ ಪುರಾಣ ಪ್ರವಚನ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೇ ಮೊದಲ ಬಾರಿಗೆ ರಥೋತ್ಸವ ಹಮ್ಮಿಕೊಳ್ಳಲಾಯಿತು.
ಗ್ರಾಮದ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಹಲವು ರಸ್ತೆಗಳಲ್ಲಿ ಸಾಗಿತು. ರಥದ ಮುಂಭಾಗದಲ್ಲಿ ನಿಂತಿದ್ದ ಮಹಿಳೆಯರು, ಹಗ್ಗವನ್ನು ಹಿಡಿದುಕೊಂಡು ರಥವನ್ನು ಮುಂದಕ್ಕೆ ಎಳೆದುಕೊಂಡು ಹೋದರು. ಮಹಿಳೆಯರ ಜೊತೆಯಲ್ಲಿ ಮಕ್ಕಳೂ ಕೈ ಜೋಡಿಸಿದರು.
‘ಬಹುತೇಕ ಗ್ರಾಮಗಳಲ್ಲಿ ಪುರುಷರು–ಮಹಿಳೆಯರು ಸೇರಿಕೊಂಡು ರಥ ಎಳೆಯುವುದು ಸಾಮಾನ್ಯ. ಆದರೆ, ಜೇಕಿನಕಟ್ಟಿ ಗ್ರಾಮದಲ್ಲಿ ಮಹಿಳೆಯರು ಮಾತ್ರ ದೇವಿಯ ರಥ ಎಳೆಯುವುದು ವಿಶೇಷ. ಇದು ಮೊದಲ ರಥೋತ್ಸವ. ಮುಂದಿನ ವರ್ಷದಿಂದ ಪ್ರತಿ ವರ್ಷವೂ ವಿಜಯದಶಮಿ ದಿನದಂದು ಈ ರಥೋತ್ಸವ ಜರುಗಲಿದೆ’ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.