ಹಾವೇರಿ: ತಾಲ್ಲೂಕಿನ ಸಂಗೂರು ಬಳಿ ವರದಾ ನದಿಗೆ ನಿರ್ಮಿಸಿರುವ ಕಿರುಸೇತುವೆಯ (ಬಾಂದಾರ್) ಕಬ್ಬಿಣದ ಹಲವು ಗೇಟ್ಗಳು ಕಳೆದ ವರ್ಷವೇ ಕಳ್ಳತನವಾಗಿದ್ದು, ಈ ವರ್ಷವೂ ಕಿರುಸೇತುವೆಗೆ ಹೊಸ ಗೇಟ್ಗಳನ್ನು ಅಳವಡಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ರೈತರು ಆರೋಪಿಸುತ್ತಿದ್ದಾರೆ.
ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ, ವರದಾ ನದಿಯು ಕೆಲ ತಿಂಗಳಿನಿಂದ ತುಂಬಿ ಹರಿಯುತ್ತಿತ್ತು. ಈಗ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ, ನದಿ ಹರಿಯುವಿಕೆಯೂ ಕ್ರಮೇಣ ತಗ್ಗುತ್ತಿದೆ. ಇಂಥ ಸಂದರ್ಭದಲ್ಲಿ ಕಿರುಸೇತುವೆಯ ಬಾಗಿಲುಗಳನ್ನು ಗೇಟ್ನಿಂದ ಮುಚ್ಚಿ ನೀರು ನಿಲ್ಲಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ರೈತರ ಆಗ್ರಹವನ್ನು ಕಡೆಗಣಿಸಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಗೇಟ್ ಅಳವಡಿಸಲು ಹಿಂದೇಟು ಹಾಕುತ್ತಿದ್ದಾರೆ. ವರದಾ ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು, ಇಂಥ ಸಂದರ್ಭದಲ್ಲಿ ನೀರು ನಿಲ್ಲಿಸದಿದ್ದರೆ ಮುಂಬರುವ ದಿನಗಳಲ್ಲಿ ಸಮಸ್ಯೆಯಾಗುತ್ತದೆ ಎಂದು ರೈತರು ದೂರುತ್ತಿದ್ದಾರೆ.
‘ಸಂಗೂರು ಹಾಗೂ ಸುತ್ತಮುತ್ತಲಿನ ರೈತರ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಲು ಕಿರುಸೇತುವೆ ನಿರ್ಮಿಸಲಾಗಿದೆ. ಕಳೆದ ವರ್ಷವೂ ಅಧಿಕಾರಿಗಳು ಸರಿಯಾಗಿ ಗೇಟ್ ಹಾಕದಿದ್ದರಿಂದ, ನೀರು ಪೋಲಾಯಿತು. ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಯಿತು. ಈ ವರ್ಷವೂ ಅಧಿಕಾರಿಗಳು ಗೇಟ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ದೂರಿದರು.
‘ಕಿರುಸೇತುವೆಯ ಕೆಲ ಗೇಟ್ಗಳನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. ಉಳಿದ ಗೇಟ್ಗಳು ಹಾಳಾಗಿದ್ದು, ತೂತುಗಳು ಬಿದ್ದಿವೆ. ರಬ್ಬರ್ ಸಹ ಸರಿಯಾಗಿ ಹಾಕುತ್ತಿಲ್ಲ. ಇಂಥ ಗೇಟ್ಗಳಿಂದ ನೀರು ಪೋಲಾಗಿ ಹೋಗುತ್ತಿದೆ. ಗೇಟ್ಗಳಿಗೆ ರಬ್ಬರ್ ಸಹ ಸರಿಯಾಗಿ ಕಿರುಸೇತುವೆಯಲ್ಲಿ ನೀರು ನಿಲ್ಲುತ್ತಿಲ್ಲ’ ಎಂದು ಹೇಳಿದರು.
‘ನದಿಯಲ್ಲಿ ನೀರು ಹೆಚ್ಚಿರುವ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಗೇಟ್ಗಳನ್ನು ಇರಿಸುತ್ತಾರೆ. ಅಂಥ ಗೇಟ್ಗಳು ಹಾಳಾಗುತ್ತಿವೆ. ಕಳ್ಳರ ಕಣ್ಣು ಬೀಳುತ್ತಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ’ ಎಂದು ತಿಳಿಸಿದರು.
‘ನೀರು ಕಡಿಮೆಯಾಗುವ ಮುನ್ನವೇ ಎಲ್ಲ ಬಾಗಿಲುಗಳಿಗೆ ಗೇಟ್ ಅಳವಡಿಸಬೇಕು. ಗೇಟ್ಗಳ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿ ಅಧಿಕಾರಿಗಳಿಗೆ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೇಟ್ಗಳನ್ನು ಅಳವಡಿಸಿಲ್ಲ’ ಎಂದು ದೂರಿದರು.
ಗೇಟ್ ಅಳವಡಿಸದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.