
ಕಳ್ಳರು ಮನೆ ಬಾಗಿಲು ಮೀಟಿ ತೆರೆದಿರುವುದು
ಹಾವೇರಿ: ಇಲ್ಲಿಯ ನಾಗೇಂದ್ರನಮಟ್ಟಿಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಈ ಸಂಬಂಧ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ನಗರಸಭೆಯ 5ನೇ ವಾರ್ಡ್ನ 5ನೇ ಕ್ರಾಸ್ ಹಾಗೂ ಸುತ್ತಮುತ್ತಲಿರುವ ಏಳು ಮನೆಗಳಲ್ಲಿ ಕಳ್ಳತನ ನಡೆದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಪೈಕಿ ಮೂರು ಮನೆಗಳಲ್ಲಿ ನಡೆದಿರುವ ಕಳ್ಳತನ ಬಗ್ಗೆ ಮಾತ್ರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಡಿ. 22ರಂದು ಬೆಳಿಗ್ಗೆಯಿಂದ ಡಿ. 23ರ ನಸುಕಿನವರೆಗೂ ಹಲವು ಮನೆಗಳಿಗೆ ಬೀಗ ಹಾಕಲಾಗಿತ್ತು. ನಿವಾಸಿಗಳು ಕೆಲಸ ನಿಮಿತ್ತ ಬೇರೆ ಕಡೆ ಹೋಗಿದ್ದರು. ಇದೇ ಅವಧಿಯಲ್ಲಿ ಮನೆಗೆ ನುಗ್ಗಿದ್ದ ಕಳ್ಳರು, ನಗದು ಹಾಗೂ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ವಿಷಯ ಗೊತ್ತಾಗಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು
‘ಮನೆಯೊಂದರಲ್ಲಿ ನಗದು ಕದ್ದಿರುವ ಕಳ್ಳರು, ಅದೇ ಮನೆಯಲ್ಲಿ ಅಡುಗೆ ಒಲೆ ಹೊತ್ತಿಸಿ ಚಹಾ ಮಾಡಿಕೊಂಡು ಕುಡಿದು ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿಕೊಂಡೇ ಕಳ್ಳರು ಕೃತ್ಯ ಎಸಗಿದ್ದಾರೆ. ಕೆಲ ದಿನಗಳಿಂದ ನಾಗೇಂದ್ರನಮಟ್ಟಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿದ್ದರು. ಟ್ರಸ್ಟ್ ಹೆಸರು ಹೇಳಿಕೊಂಡಿದ್ದರು. ಅವರ ಮೇಲೆಯೇ ಅನುಮಾನವಿದೆ’ ಎಂದು ಹೇಳಿದರು.
₹75 ಸಾವಿರ ನಗದು ಕಳವು: ‘ನಾಗೇಂದ್ರನಮಟ್ಟಿಯ 5ನೇ ಕ್ರಾಸ್ನಲ್ಲಿರುವ ದಾವಲಸಾಬ್ ಮಲಿಕ್ಸಾಬ್ ಬೇನಹಳ್ಳಿ ಎಂಬುವವರ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. ₹ 75 ಸಾವಿರ ನಗದು ಹಾಗೂ ₹ 1.45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮೂರು ಮನೆಗಳ ಕಳ್ಳತನ ಬಗ್ಗೆ ಸದ್ಯಕ್ಕೆ ಎಫ್ಐಆರ್ ದಾಖಲಾಗಿದೆ. ಉಳಿದವರು ದೂರು ನೀಡಿದರೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.