ADVERTISEMENT

ಹಾವೇರಿ: ಟಿ.ವಿ. ಪತ್ರಕರ್ತರ ಸೋಗಿನಲ್ಲಿ ಹಣ ವಸೂಲಿ– ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 18:53 IST
Last Updated 12 ಜನವರಿ 2024, 18:53 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಹಾವೇರಿ: ಟಿ.ವಿ. ಪತ್ರಕರ್ತರೆಂದು ಬಿಂಬಿಸಿಕೊಂಡು, ತಾಲ್ಲೂಕಿನ ಕಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸಿಂಗ್‌ ಆಫೀಸರ್‌ ಅನ್ನು ಬೆದರಿಸಿ ₹70 ಸಾವಿರ ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಅಸುಂಡಿ ಗ್ರಾಮದ ರುದ್ರಗೌಡ ಮಹದೇವಗೌಡ ಪಾಟೀಲ (36), ರಾಣೆಬೆನ್ನೂರಿನ ವಿದ್ಯಾನಗರದ ನಾಗರಾಜ ಟೋಪನಗೌಡ ಪಾಟೀಲ (32) ಹಾಗೂ ಬ್ಯಾಡಗಿ ತಾಲ್ಲೂಕಿನ ಕಲ್ಲೇದೇವರು ಗ್ರಾಮದ ಮಾಲತೇಶ ಬಸವಂತಪ್ಪ ಕನಕಪ್ಪನವರ (40) ಬಂಧಿತ ಆರೋಪಿಗಳು.

ಕಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಚೆಗೆ ಬಂದಿದ್ದ ಈ ಮೂವರು, ‘ನಾವು ಜನಸ್ಪಂದನಾ ವಾಹಿನಿ ಸಂಪಾದಕರು ಮತ್ತು ವರದಿಗಾರರು’ ಅಂತ ಹೇಳಿಕೊಂಡಿದ್ದಾರೆ.

ADVERTISEMENT

"ನಿಮ್ಮ ಮೇಲೆ ನಮಗೆ ದೂರುಗಳು ಬಂದಿವೆ. ಇದನ್ನು ಮುಚ್ಚಿಹಾಕಲು ₹2 ಲಕ್ಷ ಕೊಡಬೇಕು. ಇಲ್ಲವಾದರೆ ಟಿ.ವಿ.ಯಲ್ಲಿ ನಿಮ್ಮ ಮೇಲಿನ ಪ್ರಕರಣಗಳ ಬಗ್ಗೆ ಪ್ರಸಾರ ಮಾಡುತ್ತೇವೆ’ ಎಂದು ಬೆದರಿಸಿ, ಫೋನ್‌ ಪೇ ಮೂಲಕ ₹70 ಸಾವಿರ ಹಣವನ್ನು ಹಾಕಿಸಿಕೊಂಡು ಹೋದರು’ ಎಂದು ನರ್ಸಿಂಗ್‌ ಆಫೀಸರ್‌ ಸಾವಿತ್ರಿ ಪಟಗಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.