ಹಾವೇರಿ: ಜಿಲ್ಲೆಯಾದ್ಯಂತ ಬಿಡುವು ನೀಡುತ್ತಲೇ ಮಳೆ ಸುರಿಯುತ್ತಿದೆ. ಮಂಗಳವಾರವೂ ಹಲವು ಕಡೆಗಳಲ್ಲಿ ಜೋರು ಮಳೆ ಸುರಿದು, ರಸ್ತೆಗಳಲ್ಲಿ ನೀರು ಹರಿಯಿತು.
ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಮಂಗಳವಾರ ಬೆಳಿಗ್ಗೆಯಿಂದಲೇ ಜಿಟಿಜಿಟಿಯಾಗಿ ಶುರುವಾದ ಮಳೆ, ಕ್ರಮೇಣ ಜೋರಾಗಿ ಅಬ್ಬರಿಸಿತು. ಬಿಡುವು ನೀಡುತ್ತಲೇ ತಡರಾತ್ರಿಯವರೆಗೂ ಮಳೆ ಆಯಿತು.
ಮಳೆ ನೀರು ರಸ್ತೆ ಮೇಲೆಯೇ ಹರಿಯಿತು. ನಗರದ ಹಲವು ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ, ರಸ್ತೆಗಳು ಜಲಾವೃತಗೊಂಡ ಸ್ಥಿತಿಯಲ್ಲಿದ್ದವು.
ಬಸವೇಶ್ವರನಗರದ, ಹಳೇ ಪಿ.ಬಿ.ರಸ್ತೆ, ಎಂ.ಜಿ. ರಸ್ತೆ, ಅಶ್ವಿನಿನಗರ, ದಾನೇಶ್ವರಿನಗರ, ಮಂಜುನಾಥ ನಗರ, ಅಶ್ವಿನಿನಗರ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ, ಉಜಾರಿ ಲಕಮಾಪುರ, ಹಾನಗಲ್ ರಸ್ತೆ, ಗುತ್ತಲ ರಸ್ತೆ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಜೋರು ಮಳೆ ಸುರಿಯಿತು.
ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ನೀರಿನಿಂದ ಜಲಾವೃತಗೊಂಡು ಕೆರೆಯಂತಾಗಿತ್ತು. ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದ ಜನರು, ಕ್ರೀಡಾಂಗಣದ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು. ‘ಸಿಂಥೆಟಿಕ್ ಟ್ರ್ಯಾಕ್’ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.