ಹಿರೇಕೆರೂರು: ‘2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭಗೊಳ್ಳಲಿದ್ದು, ಈ ವರ್ಷವೂ ಬೆಳೆ ಸಮೀಕ್ಷಾ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು
ಸಹಾಯಕ ಕೃಷಿ ನಿರ್ದೇಶಕ ಎಂ.ವಿ.ಮಂಜುನಾಥ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ತಾಲ್ಲೂಕು ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ರೈತರ ಬೆಳೆ ಸಮೀಕ್ಷೆ 2023-24 ಎಂಬ ಮೊಬೈಲ್ ಆ್ಯಪ್ ಮೂಲಕ ಬೆಳೆ ವಿವರ ದಾಖಲಿಸಬೇಕು. ಆ್ಯಪ್ ಬಳಕೆ ಬಗ್ಗೆ ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ’ ಎಂದರು.
ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯ ಮುಕ್ತಾಯವಾಗಿದ್ದು, ಈ ವರ್ಷ ಮಳೆಯು ಕಾಲ ಕಾಲಕ್ಕೆ ಸರಿಯಾಗಿ ಆಗದೇ ಇರುವುದರಿಂದ ಬಿತ್ತನೆ ಕಾರ್ಯದಲ್ಲಿ ಹಿಂದು ಮುಂದು ಆಗಿದ್ದು, ಬೆಳೆಯು ಸಸಿಯ ಹಂತದಿಂದ ಹೂವಾಗುವ ಹಂತದ ವರೆಗೆ ಇದ್ದು, ಹಿಂದೆ ಬಿತ್ತನೆ ಮಾಡಿದಂತಹ ರೈತರು ಬೆಳೆಯನ್ನು ಅಳಿಸುವ ಅಥವಾ ನಾಶಪಡಿಸುತ್ತಿರುವುದು ಅಲ್ಲಿಲ್ಲಿ ಕಂಡು ಬಂದಿದೆ. ಬೆಳೆ ವಿಮೆ ಮಾಡಿಸಿದ ರೈತರು ಬೆಳೆ ಸಮೀಕ್ಷೆಯನ್ನು ಆ್ಯಪ್ನಲ್ಲಿ ಸಮೀಕ್ಷೆ ಮಾಡಿ, ಆಮೇಲೆ ಬೆಳೆಗಳನ್ನು ಬದಲಾವಣೆ ಮಾಡಬೇಕು’ ಎಂದು ತಿಳಿಸಿದರು.
ಹಿರೇಕೆರೂರ ತಹಶೀಲ್ದಾರ್ ಎಚ್.ಪ್ರಭಾಕರಗೌಡ,ರಟ್ಟೀಹಳ್ಳಿ ತಹಶೀಲ್ದಾರ್ ಕೆ.ಗುರುಬಸವರಾಜ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮಿಕಾಂತ ಬೊಮ್ಮಣ್ಣನವರ, ಕೃಷಿ ಅಧಿಕಾರಿ ನಿಂಗಪ್ಪ ಕಾಕೋಳ, ಸೇರಿದಂತೆ ಕಂದಾಯ, ಕೃಷಿ, ತೋಟಗಾರಿಕಾ, ಸಾಂಖೀಕ ಇಲಾಖೆ ಸಿಬ್ಬಂದಿಗ ಮತ್ತು ಬೆಳೆ ವಿಮಾ ಇಲಾಖಾ ಪ್ರತಿನಿಧಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.