ADVERTISEMENT

ಹಿರೇಕೆರೂರ: ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 2:35 IST
Last Updated 6 ಅಕ್ಟೋಬರ್ 2025, 2:35 IST
ಹಿರೇಕೆರೂರ ಪಟ್ಟಣದಲ್ಲಿ ಶನಿವಾರ ತಾಲ್ಲೂಕಿನ ತಹಶೀಲ್ದಾರ್ ಎಂ. ರೇಣುಕಾ ರವರಿಗೆ  ಜಿಲ್ಲೆಯ ರೈತ ಸಂಘಗಳ  ಒಕ್ಕೂಟದಡಿಯಲ್ಲಿ ಸಾಮೂಹಿಕ ನಾಯಕತ್ವದಡಿ ಮನವಿ ಸಲ್ಲಿಸುತ್ತೀರುವುದು.  
ಹಿರೇಕೆರೂರ ಪಟ್ಟಣದಲ್ಲಿ ಶನಿವಾರ ತಾಲ್ಲೂಕಿನ ತಹಶೀಲ್ದಾರ್ ಎಂ. ರೇಣುಕಾ ರವರಿಗೆ  ಜಿಲ್ಲೆಯ ರೈತ ಸಂಘಗಳ  ಒಕ್ಕೂಟದಡಿಯಲ್ಲಿ ಸಾಮೂಹಿಕ ನಾಯಕತ್ವದಡಿ ಮನವಿ ಸಲ್ಲಿಸುತ್ತೀರುವುದು.     

ಹಿರೇಕೆರೂರ: ತಾಲ್ಲೂಕಿನಾದ್ಯಂತ ನಾಲ್ಕು ತಿಂಗಳುಗಳಿಂದ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಇಂಥ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಸೂಕ್ತ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಹನುಮಂತಪ್ಪ ದಿವಿಗೀಹಳ್ಳಿ ಒತ್ತಾಯಿಸಿದರು.

ಜಿಲ್ಲೆಯ ರೈತ ಸಂಘಗಳ ಒಕ್ಕೂಟದಿಂದ ಶನಿವಾರ ತಹಶೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ಸರ್ಕಾರದ ಮಾರ್ಗಸೂಚಿಯ ಪ್ರಕಾರ ಹಿಂದಿನ ಮಾದರಿಯ ಸರ್ಕಾರದ ನಿಯಮದ ಅನುಸಾರ ಮಳೆ ಆಶ್ರಿತ ಮತ್ತು ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಕೂಡಲೇ ನೀಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಸರ್ವಜ್ಞ ಎತ ನೀರಾವರಿ ಯೋಜನೆಯಲ್ಲಿ 44 ಗ್ರಾಮಗಳ 88 ಕೆರೆಗಳನ್ನು ತುಂಬಿಸುವುದು ವಿಳಂಬವಾಗಿದೆ. ಕೂಡಲೇ ನೀರು ತುಂಬಿಸಬೇಕು. ತಾಲ್ಲೂಕಿನ ಕೆರೆ–ಕಟ್ಟೆಗಳು, ಸಣ್ಣ ನೀರಾವರಿ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಕೆರೆಗಳನ್ನು ಹದ್ದು ಬಸ್ತು ಮಾಡಿಸಬೇಕು’ ಎಂದು ಒತ್ತಾಯಿಸಿದರು.

‘ಅಕ್ರಮ– ಸಕ್ರಮದ ಅಡಿ ಹೆಸ್ಕಾಂಗೆ ಹಣ ತುಂಬಿದ ರೈತರಿಗೆ ಕಂಬ, ತಂತಿ, ಟಿಸಿಯನ್ನು ಕೊಡಬೇಕು. 2024-25ನೇ ಸಾಲಿನಲ್ಲಿ ಅಡಿಕೆ ವಿಮೆ ತುಂಬಿದ ರೈತರಿಗೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ಬೇಗನೇ ಪರಿಹಾರದ ಹಣ ವಿತರಿಸಬೇಕು’ ಎಂದು ಭಾರತೀಯ ಕೃಷಿ ಕಾರ್ಮಿಕ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಕ. ದೂದೀಹಳ್ಳಿ ಹೇಳಿದರು.

ಗ್ರಾಮ ಪಂಚಾಯತಿಗಳಲ್ಲಿ ಕಳೆದ 5 ವರ್ಷಗಳಲ್ಲಿ ವಾರ್ಡ್‌ ಸಭೆ, ಮಕ್ಕಳ ಸಭೆ ನಡೆಸಿಲ್ಲ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೆವಿಜಿ ಬ್ಯಾಂಕ್ ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿ ಜನರಿಗೆ ಸಾಫ್ಟ್‌ವೇರ್ ಬಹಳ ತೊಂದರೆಯನ್ನುಂಟು ಮಾಡುತ್ತಿದೆ. ಬೇಗನೇ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ತಾಲ್ಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತುಂಬಾ ಜಾಸ್ತಿಯಾಗುತ್ತದೆ. ಅವರಿಂದ ಬಹಳ ಕಿರುಕುಳ ವಾಗುತ್ತಿದೆ. ತಾಲ್ಲೂಕಿನ ಮೈಕ್ರೊ ಫೈನಾನ್ಸ್ ಅಧಿಕಾರಿಗಳನ್ನು ಕರೆಯಿಸಿ ಅವರೊಂದಿಗೆ ಚರ್ಚೆಗೆ ಅವಕಾಶ ನೀಡಬೇಕು ಎಂದರು. 

ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಅಂದರೆ 2 ವರ್ಷಗತಿಸಿದರೂ ಬಿ.ಪಿ.ಎಲ್ ಕಾರ್ಡ್‌ ವಿತರಿಸುತ್ತಿಲ್ಲ. ಅರ್ಹರಿಗೆ ಬಿಪಿಎಲ್ ಕಾರ್ಡ್‌ ವಿತರಿಸಲು ಬೇಗನೇ ಕ್ರಮ ಕೈಗೊಳ್ಳಬೇಕು. ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅ. 13ರಂದು ಪಟ್ಟಣದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್‌ ಕಚೇರಿಯವರೆಗೆ ಮೆರವಣಿಗೆ ನಡೆಸಿ, ತಹಶೀಲ್ದಾರ್‌ ಕಚೇರಿಯ ಎದುರು ಧರಣಿ ಮಾಡಲಾಗುವುದು ಎಂದು ತಿಳಿಸಿದರು.

ಮಹೇಶ ಕೊಟ್ಟೂರ, ಹನುಮಂತಪ್ಪ ಕಬ್ಬಾರ, ಮಂಜುನಾಥ ಸಂಬೋಜಿ, ರಾಜೇಶ ಅಂಗಡಿ, ಬಸವರಾಜ ನೀಲಗೇರಿ, ನಾಗರಾಜ ದೊಡ್ಡಮನಿ, ಶಿವಾನಂದಪ್ಪ ಜಾಡರ, ರೇಣುಕಾ ರಾಜ್ ಇದ್ದರು.

ನೇರ ಸಾಲ ನೀಡಲು ಒತ್ತಾಯ

‘ಸರ್ವೆ ಇಲಾಖೆಯಲ್ಲಿ ಹದ್ದು ಬಸ್ತ್‌ಗೆ ಹಣ ತುಂಬಿದ ರೈತರಿಗೆ ಹದ್ದು ಬಸ್ತ್‌ ಮಾಡದೇ ಸತಾಯಿಸುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಪಿಎಲ್‌ಡಿ ಬ್ಯಾಂಕ್ ಕೆಸಿಸಿ ಬ್ಯಾಂಕ್‌ಗಳಲ್ಲಿ ರೈತರಿಗೆ ಭೂ ಅಭಿವೃದ್ದಿ ಸಾಲ ನೀಡಲು ಇಬ್ಬರು ಜಾಮೀನುದಾರರ ದಾಖಲೆಗಳೊಂದಿಗೆ ಅವರ ಸಹಿ ಕೇಳುತ್ತಿದ್ದಾರೆ. ಪಹಣಿಯಲ್ಲಿ ಭೋಜಾ ನೀಡಿದ ರೈತರಿಗೆ ನೇರವಾಗಿ ಸಾಲ ನೀಡಬೇಕು’ ಎಂದು ರೈತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.