
ಹಾವೇರಿ: ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು 18 ಷರತ್ತು ವಿಧಿಸಿರುವುದನ್ನು ಖಂಡಿಸಿರುವ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಷರತ್ತು ಸಡಿಲಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸಭೆ ನಡೆಸಿದ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಹಾಗೂ ಕಾನೂನಿನ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿದರು.
ದೀಪಾವಳಿ ಸಂದರ್ಭದಲ್ಲಿ ಏರ್ಪಡಿಸಿದ್ದ ಹೋರಿ ಬೆದರಿಸುವ ಆಚರಣೆ ಹಾಗೂ ಹೋರಿ ಮೆರವಣಿಗೆ ವೇಳೆ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಹೋರಿ ಬೆದರಿಸುವ ಸ್ಪರ್ಧೆಗೆ 18 ಷರತ್ತುಗಳ ಅನ್ವಯ ಅನುಮತಿ ಕಡ್ಡಾಯಗೊಳಿಸಿದೆ.
ಹಬ್ಬದ ನಂತರ ಹಂತ ಹಂತವಾಗಿ ಹಲವು ಗ್ರಾಮಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಹಲವರು ಸಿದ್ಧತೆ ಮಾಡಿಕೊಂಡಿದ್ದರು. ಜಿಲ್ಲಾಡಳಿತದ ನಿರ್ಧಾರದಿಂದಾಗಿ ಎಲ್ಲ ಸ್ಪರ್ಧೆಗಳು ರದ್ದಾಗಿವೆ. ಹೀಗಾಗಿ, ಸ್ಪರ್ಧೆಗಾಗಿ ಹೋರಿ ಸಾಕಿರುವ ಮಾಲೀಕರು ಹಾಗೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸ್ಪರ್ಧೆಗೆ ತಯಾರಿ ಮಾಡಿಕೊಂಡಿದ್ದ ಆಯೋಜಕರು ಸಹ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಷರತ್ತು ಖಂಡಿಸಿ ‘ಅಖಿಲ ಕರ್ನಾಟಕ ರೈತರ ಜನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿ‘ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಹೋರಾಟ ರೂಪಿಸಲು ಸಿದ್ಧತೆ ನಡೆದಿದೆ. ಇದೇ ಕಾರಣಕ್ಕೆ ಭಾನುವಾರ ಸಭೆ ನಡೆಸಿ ಹೋರಿ ಮಾಲೀಕರು, ರೈತರು ಹಾಗೂ ಹೋರಿ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಷರತ್ತು ಸಡಿಲಿಸಲು ಆಗ್ರಹ: ‘ರೈತರ ಗ್ರಾಮೀಣ ಜಾನಪದ ಕ್ರೀಡೆಯಾಗಿರುವ ಹೋರಿ ಹಬ್ಬವನ್ನು ಪ್ರತಿ ವರ್ಷವೂ ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ, ಈ ವರ್ಷ ಹಬ್ಬಕ್ಕೆ ಸರ್ಕಾರ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಷರತ್ತುಗಳನ್ನು ಸಡಿಲಿಸಿ ಹಬ್ಬ ಆಚರಣೆಗೆ ಅನುಕೂಲ ಕಲ್ಪಿಸಬೇಕು’ ಎಂದು ಮಾಲೀಕರು ಹಾಗೂ ಅಭಿಮಾನಿಗಳು ಸಭೆ ಮೂಲಕ ಆಗ್ರಹಿಸಿದರು.
‘ಜಲ್ಲಿಕಟ್ಟು ಹಾಗೂ ಕಂಬಳ ಮಾದರಿಯಲ್ಲಿಯೇ ಹಾವೇರಿ ಜಿಲ್ಲೆಯಾದ್ಯಂತ ಪ್ರತಿ ವರ್ಷವೂ ಹೋರಿ ಹಬ್ಬ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸುಮಾರು 4 ಸಾವಿರ ಹೋರಿಗಳಿದ್ದು, ಪ್ರತಿಯೊಂದು ಹೋರಿಗೂ ಅಭಿಮಾನಿಗಳಿದ್ದಾರೆ. ಸರ್ಕಾರದ ಷರತ್ತಿನಿಂದ ಪ್ರತಿಯೊಬ್ಬರ ಮನಸ್ಸಿಗೂ ನೋವಾಗಿದೆ. ಜೊತೆಗೆ, ಮುಂಗಡವಾಗಿ ನಿಗದಿಯಾಗಿದ್ದ ಹೋರಿ ಸ್ಪರ್ಧೆಗಳೂ ರದ್ದಾಗಿವೆ’ ಎಂದು ಹೇಳಿದರು.
‘ಗಣೇಶ ಹಬ್ಬದ ಸಂದರ್ಭದಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿತ್ತು. ಈಗ ದೀಪಾವಳಿ ಹಬ್ಬದಂದು ಹೋರಿ ಹಬ್ಬಕ್ಕೆ ನಿರ್ಬಂಧ ವಿಧಿಸಿದೆ. ಇದು ಗ್ರಾಮೀಣ ಕ್ರೀಡೆಗಳ ಮೇಲೆ ಸರ್ಕಾರ ಮಾಡುತ್ತಿರುವ ದಬ್ಬಾಳಿಕೆ. ಇದರ ವಿರುದ್ಧ ಸಂಘಟಿತ ಹೋರಾಟ ರೂಪಿಸಲಾಗುವುದು’ ಎಂದು ತಿಳಿಸಿದರು.
ಹೋರಿಗಳ ಸಮೇತ ಪ್ರತಿಭಟನೆ: ‘ಹೋರಿ ಹಬ್ಬದ ಷರತ್ತುಗಳನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಎಸ್ಪಿಗೆ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು’ ಎಂದು ಹೋರಿ ಮಾಲೀಕರು ಮಾಹಿತಿ ನೀಡಿದರು.
‘ಹೋರಿ ಹಬ್ಬಕ್ಕೆ ಅನುಮತಿ ನೀಡಿ, ಹಬ್ಬವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಗುವುದು. ಅದಕ್ಕೆ ಅವರು ಸ್ಪಂದಿಸದಿದ್ದರೆ, ಹೋರಿಗಳ ಸಮೇತ ಜಿಲ್ಲಾ ಕೇಂದ್ರದಲ್ಲಿ ದೊಡ್ಡಮಟ್ಟದ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಎದುರು ಹೋರಿಗಳನ್ನು ಕಟ್ಟಿ ಹಾಕುತ್ತೇವೆ. ಹೋರಿ ಅಭಿಮಾನಿಗಳು ಸಹ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಹೇಳಿದರು.
‘ಷರತ್ತು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೊಕದ್ದಮೆ’
‘ಹೋರಿ ಹಬ್ಬವೆಂಬುದು ಹಾವೇರಿ ಜಿಲ್ಲೆಯ ಗ್ರಾಮೀಣ ಜನರ ಜನಪದ ಕ್ರೀಡೆ. ಈ ಹಬ್ಬ ಜನರ ಧಾರ್ಮಿಕ ಭಾವನೆಗೆ ಸಂಬಂಧಪಟ್ಟ ಆಚರಣೆ. ಇಂಥ ಹಬ್ಬದ ಅನುಮತಿಗಾಗಿ 18 ಷರತ್ತು ವಿಧಿಸಲಾಗಿದೆ. ಅಗತ್ಯಬಿದ್ದರೆ ಈ ಷರತ್ತುಗಳನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು’ ಎಂದು ಹೈಕೋರ್ಟ್ ವಕೀಲ ಸಂದೀಪ ಪಾಟೀಲ ತಿಳಿಸಿದರು.
ಹೋರಿ ಮಾಲೀಕರು ಹಾಗೂ ಅಭಿಮಾನಿಗಳ ಸಭೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘18 ಷರತ್ತುಗಳಲ್ಲಿ ಯಾವ ಷರತ್ತು ಪಾಲಿಸಲು ಸಾಧ್ಯ ? ಯಾವ ಷರತ್ತು ಪಾಲಿಸಲು ಆಗುವುದಿಲ್ಲ ? ಎಂಬುದರ ಬಗ್ಗೆ ಹೊಸ ಪಟ್ಟಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಯವರು ಷರತ್ತು ಸಡಿಲಿಸಿ ಹಬ್ಬಕ್ಕೆ ಅನುಮತಿ ನೀಡಿದರೆ ಖುಷಿಯಿಂದ ಹೋರಿ ಹಬ್ಬ ಮಾಡುತ್ತೇವೆ. ಇಲ್ಲದಿದ್ದರೆ ಹೈಕೋರ್ಟ್ ಮೆಟ್ಟಿಲೇರಲು ನಾವು ಸಿದ್ಧರಾಗಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.