ಹಾವೇರಿ: ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಸತಿ ನಿಲಯ ಹಾಗೂ ವಸತಿ ಶಾಲೆಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಆಹಾರ ಪದಾರ್ಥಗಳ ಪೈಕಿ ಉಳಿಕೆಯಾದ ಆಹಾರ ಪದಾರ್ಥಗಳನ್ನು ಜಿಲ್ಲಾಡಳಿತಕ್ಕೆ ಮಂಗಳವಾರ ಹಸ್ತಾಂತರಿಸಲಾಯಿತು.
ಲಾಕ್ಡೌನ್ ಕಾರಣ ವರ್ಷಾಂತ್ಯದಲ್ಲಿ ಉಳಿಕೆಯಾದ ಸಮಾಜ ಕಲ್ಯಾಣ ಇಲಾಖೆಯ 1500 ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ 100 ಆಹಾರ ಪದಾರ್ಥಗಳ ಕಿಟ್ಗಳನ್ನು ತಯಾರಿಸಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.
ಮೇ 21ರವರೆಗೆ ಜಿಲ್ಲೆಯ ಉಭಯ ಇಲಾಖೆಯ ವಿವಿಧ ವಸತಿ ನಿಲಯ ಹಾಗೂ ಸರ್ಕಾರಿ ವಸತಿ ಶಾಲೆಗಳಲ್ಲಿ ಉಳಿಕೆಯಾದ ವಿವಿಧ ಪದಾರ್ಥಗಳ ಒಳಗೊಂಡಂತೆ 1600 ಕಿಟ್ ತಯಾರಿಸಲಾಗಿದೆ. ಈ ಕಿಟ್ಗಳಲ್ಲಿ ತೊಗರಿಬೇಳೆ, ಉಪ್ಪು, ಅವಲಕ್ಕಿ, ಅಡುಗೆ ಎಣ್ಣೆ, ಹೆಸರು ಕಾಳು, ಕಡ್ಲೆಕಾಳು, ಅಲಸಂದೆ ಕಾಳು, ರವೆ, ಸಕ್ಕರೆ, ಕಾರದಪುಡಿ, ಸಾಸಿವೆ, ಜೀರಿಗೆ ಹಾಗೂ ಅರಿಸಿನಪುಡಿ ಒಳಗೊಂಡ 13 ವಿವಿಧ ಬಗೆಯ ಆಹಾರ ಸಾಮಗ್ರಿಗಳನ್ನೊಳಗೊಂಡಿದ್ದು, ಈ ಕಿಟ್ಗಳನ್ನು ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚೈತ್ರಾ ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗರಾಜ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.