ADVERTISEMENT

ಇಮ್ಮಡಿ ಪುಲಿಕೇಶಿ ಪ್ರತಿಮೆ ಸ್ಥಾಪಿಸಿ: ಬೇಕ್ರಿ ರಮೇಶ್‌ ಆಗ್ರಹ

ಕದಂಬ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 12:56 IST
Last Updated 19 ಆಗಸ್ಟ್ 2022, 12:56 IST
ಬೇಕ್ರಿ ರಮೇಶ್‌ 
ಬೇಕ್ರಿ ರಮೇಶ್‌    

ಹಾವೇರಿ: ‘ಕನ್ನಡ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದ ಮುಂದೆ ಸ್ಥಾಪಿಸಬೇಕು’ ಎಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉತ್ತರ ಪಥೇಶ್ವರ ಹರ್ಷವರ್ಧನನು ಇಮ್ಮಡಿ ಪುಲಿಕೇಶಿಯ ಎದುರು ಸೋಲನ್ನು ಒಪ್ಪಿಕೊಂಡು, ಇಮ್ಮಡಿ ಪುಲಿಕೇಶಿಗೆ ‘ದಕ್ಷಿಣ ಪಥೇಶ್ವರ’ ಬಿರುದು ನೀಡಿದ್ದಾನೆ. ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಮನಸ್ಸು ಮಾಡಿದ್ದರೆ ಭಾರತದ ಚಕ್ರರ್ತಿಯಾಗಿ ಮರೆಯಬಹುದಿತ್ತು’ ಎಂದರು.

ದಿಗ್ವಿಜಯ ಯಾತ್ರೆ:

ADVERTISEMENT

‘ಕನ್ನಡಿಗರಾದ ನಾವು ಕನ್ನಡ ಉಳಿಸಿ ಎಂದು ಕನ್ನಡಿಗರನ್ನೇ ಕೇಳಬೇಕಾದ ದುರ್ಗತಿ ಬಂದಿದೆ. ರಾಜ್ಯದಲ್ಲಿ ಮತ್ತೊಂದು ಬೃಹತ್ ಗೋಕಾಕ್ ಚಳವಳಿ ನಡೆಸುವ ಅವಶ್ಯವಿದೆ.ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಪರಭಾಷಿಕರು ನಿರಂತರವಾಗಿ ದೌರ್ಜನ್ಯ, ಪುಂಡಾಟಿಕೆ ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ಕನ್ನಡಿಗರನ್ನು ಜಾಗೃತಗೊಳಿಸಲು ಇಮ್ಮಡಿ ಪುಲಿಕೇಶಿ ದಿಗ್ವಿಜಯ ಯಾತ್ರೆಯನ್ನು ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಕನ್ನಡಿಗರಿಗೆ ಉದ್ಯೋಗದ ಕೊರತೆ ಸೃಷ್ಟಿಸುತ್ತಿರುವುದು, ಅನ್ಯ ಭಾಷೆಯಲ್ಲಿ ವ್ಯವಹಾರಿಕ ಪ್ರಜ್ಞೆ ಮತ್ತು ಆಡಳಿತ ಪ್ರಜ್ಞೆಯನ್ನು ಯಥೇಚ್ಛಗೊಳಿಸಿ ಕನ್ನಡಿಗರು ಭಾಷಾ ವಲಸಿಗರಾಗಿ ನಿಲ್ಲುವಂತೆ ಸನ್ನಿವೇಶ ಸೃಷ್ಟಿಸಲಾಗಿದೆ.75 ವರ್ಷದಿಂದ ಆಳಿದ ಕೇಂದ್ರ ಸರ್ಕಾರಗಳು ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಲೇ ಬರುತ್ತಿದ್ದಾರೆ. ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಸ್‌. ಶಿವಕುಮಾರ್‌, ಮುಖಂಡರಾದಮಾರುತಿ ಎನ್‌, ಉಮ್ಮಡಹಳ್ಳಿ ನಾಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.