ADVERTISEMENT

ಭಾಷೆ ಉಳಿವಿಗೆ ಸುಗ್ರೀವಾಜ್ಞೆ ಹೊರಡಿಸಿ: ವಕೀಲ ಅಶೋಕ ಹಾರನಹಳ್ಳಿ

ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 19:45 IST
Last Updated 7 ಜನವರಿ 2023, 19:45 IST
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಮಾತನಾಡಿದರು
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ ಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಮಾತನಾಡಿದರು   

ಪಾಪು-ಚಂಪಾ ವೇದಿಕೆ(ಹಾವೇರಿ): ‘ಕನ್ನಡ ಭಾಷೆ ಅಧಿಕೃತವಾಗಿ ಎಲ್ಲ ಹಂತದಲ್ಲೂ ಅನುಷ್ಠಾನಗೊಳಿಸುವ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕವನ್ನು ಮುಖ್ಯಮಂತ್ರಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿಯೇ ಕಾನೂನಾಗಿ ಜಾರಿಗೆ ತರಬೇಕಿತ್ತು. ಕನ್ನಡದ ಉಳಿವಿಗಾಗಿ ಸುಗ್ರೀವಾಜ್ಞೆ ಮೂಲಕವಾದರೂ ತಕ್ಷಣ ಜಾರಿಗೆ ತರಲಿ’ ಎಂದು ವಕೀಲ ಅಶೋಕ ಹಾರನಹಳ್ಳಿ ಆಗ್ರಹಿಸಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ’ದ ಕುರಿತು ನಡೆದ ಗೋಷ್ಠಿಯ ‘ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಮತ್ತು ಕಾನೂನು’ ಕುರಿತು ವಿಷಯ ಮಂಡಿಸಿ ಮಾತನಾಡಿದರು. ‘ಮುಖ್ಯಮಂತ್ರಿಯವರು ಸಾರ್ವಜನಿಕ ಸಭೆಗಳಲ್ಲಿ, ಮಾಧ್ಯಮಗಳಲ್ಲಿ ಕಾನೂನು ಜಾರಿಗೆ ತರುತ್ತೇನೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಅವಕಾಶ ದೊರೆತಾಗ ಮಾಡಿಬಿಡಬೇಕಿತ್ತು. ಒಂದೆರಡು ತಿಂಗಳಲ್ಲಿ ಅವರ ಅಧಿಕಾರ ಸಹ ಮುಕ್ತಾಯವಾಗಲಿದೆ’ ಎಂದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಪ್ರಾಮುಖ್ಯ ನೀಡಲಾಗಿದೆ. ಆದರೆ, ನ್ಯಾಯಾಲಯವು ಪಾಲಕರಿಗೆ ಭಾಷಾ ಸ್ವಾತಂತ್ರ್ಯ ನೀಡಿದ್ದು, ಅತಿರೇಕದ ನಿರ್ಣಯ. ಇದು ಕನ್ನಡ ಭಾಷೆ ಬೆಳವಣಿಗೆಗೆ ದೊಡ್ಡ ಹಿನ್ನಡೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹಾವನೂರು ವರದಿಗೆ ಐವತ್ತು ವರ್ಷ’ ವಿಷಯದ ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಹಿಂದುಳಿದ ವರ್ಗದವರ ಪಾಲಿಗೆ ಹಾವನೂರು ವರದಿ ಬೈಬಲ್‌ ಇದ್ದಂತೆ. ಅದರ ಪರಿಣಾಮ ಹಿಂದುಳಿದ ವರ್ಗದವರು ಶಿಕ್ಷಣ, ಉದ್ಯೋಗ ಪಡೆದು ಸಮಾಜಮುಖಿಯತ್ತ ಸಾಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.