
ಹಾವೇರಿ: ‘ಅಪಾಯದ ಅಂಚಿನಲ್ಲಿರುವ ಸಂವಿಧಾನವನ್ನು ಉಳಿಸಿಕೊಳ್ಳಬೇಕು. ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಶೋಷಿತ ಸಮುದಾಯಗಳ ಜಾಗೃತಿಗಾಗಿ ಚಿತ್ರರ್ದುಗದಲ್ಲಿ ಜ.28ರಂದು ಶೋಷಿತರ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ಇಲ್ಲಿನ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಶೋಷಿತರ ಜಾಗೃತಿ ಸಮಾವೇಶದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶ ಯಾರ ವಿರುದ್ಧವಾಗಿಯೂ ಅಲ್ಲ, ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಕೆಲವರು ಕಾಂತರಾಜ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನಮ್ಮ ಮೇಲೆ ಸವಾರಿ ಮಾಡುವುದಾಗಿ ಸಂದೇಶ ನೀಡಿದ್ದಾರೆ. ಸರ್ಕಾರ ಇನ್ನು ವರದಿಯನ್ನೇ ಬಿಡುಗಡೆಗೊಳಿಸಿಲ್ಲ, ವೈಜ್ಞಾನಿಕ- ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ ಎಂದರು.
ಸಭೆಯಲ್ಲಿ ಅಖಿಲ ಕರ್ನಾಟಕ ಮಡಿವಾಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಮಣ್ಯ, ರಾಜ್ಯ ಮುಖಂಡರಾದ ರಾಮಕೃಷ್ಣ, ಕೃಷ್ಣಮೂರ್ತಿ ಕೆ.ಎಂ, ಕೃಷ್ಣಮೂರ್ತಿ ಜಿ, ಸ್ಥಳೀಯ ಮುಖಂಡರಾದ ರಮೇಶ ಆನವಟ್ಟಿ, ಬಸವರಾಜ ಹೆಡಿಗೊಂಡ, ಉಡಚಪ್ಪ ಮಾಳಗಿ, ರತ್ನಾಕರ ಕುಂದಾಪುರ, ಸಿದ್ದಣ್ಣ ಅಂಬಲಿ, ಸಂಜಯಗಾಂಧಿ ಸಂಜೀವಣ್ಣನವರ, ಈರಪ್ಪ ಲಮಾಣಿ, ಜಮೀರ ಅಹ್ಮದ ಜಿಗರಿ, ಮನೋಹರ ಹಾದಿಮನಿ, ಫಕ್ಕೀರಪ್ಪ ಕುಂದೂರ, ಮಂಜುನಾಥ ಕಂಕನವಾಡ, ನಿಂಗರಾಜ ಗಾಳೆಮ್ಮನವರ, ಸುರೇಶ ಮಡಿವಾಳರ, ಶೆಟ್ಟಿ ವಿಭೂತಿ ಇದ್ದರು.
ಮಾಲತೇಶ ಅಂಗೂರ ಸ್ವಾಗತಿಸಿದರು, ಪ್ರಕಾಶ ಬಣಕಾರ ನಿರೂಪಿಸಿದರು, ನಾಗರಾಜ ಬಡಮ್ಮನವರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.