ADVERTISEMENT

ಬ್ಯಾಡಗಿ: ಜನೌಷಧಿ ಮಳಿಗೆ ಆರಂಭಿಸಲು ಆಗ್ರಹಿಸಿ ಮನವಿ 

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:27 IST
Last Updated 15 ನವೆಂಬರ್ 2025, 4:27 IST
ಬ್ಯಾಡಗಿಯಲ್ಲಿ ಜನೌಷಧಿ ಮಳಿಗೆಯನ್ನು ಪುನ: ತೆರೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಬ್ಯಾಡಗಿಯಲ್ಲಿ ಜನೌಷಧಿ ಮಳಿಗೆಯನ್ನು ಪುನ: ತೆರೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಾಲ್ಲೂಕಾ ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.   

ಬ್ಯಾಡಗಿ: ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ಸಂಜೀವಿನಿಯಂತಿರುವ ಜನೌಷಧಿ ಮಳಿಗೆಯನ್ನು ಬಂದ್‌ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ವಿವಿಧ ಸಂಟನೆಗಳ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕಾಂತೇಶ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತ ಮುಖಂಡ ಕಿರಣ ಗಡಿಗೋಳ ಮಾತನಾಡಿ, ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಬಡ ಹೊರರೋಗಿಗಳಿಗೆ ಕಡಿಮೆ ದರದಲ್ಲಿ ಮಾತ್ರೆ ಹಾಗೂ ಇನ್ನಿತರ ಔಷಧಗಳು ಜನೌಷಧಿ ಮಳಿಗೆಯಲ್ಲಿ ದೊರೆಯುತ್ತಿದ್ದವು. ಈಗ ಅವುಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಬಡ ರೋಗಿಗಳು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ.

ಇಲ್ಲಿಯ ಆಸ್ಪತ್ರೆಗೆ ಪ್ರತಿದಿನ 500ಕ್ಕೂ ಹೆಚ್ಚು ಹೊರರೋಗಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದು, ಎಲ್ಲಾ ಔಷಧಗಳು ಪುಕ್ಕಟೆಯಾಗಿ ಸಿಗುತ್ತಿಲ್ಲ. ಇದರಿಂದ ದುಬಾರಿಯಾಗಿರುವ ಪಿಸಿಡಿ ಕಂಪನಿಯ ಔಷಧಗಳನ್ನು ಖಾಸಗಿ ಅಂಗಡಿಗಳಿಂದ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಜನೌಷಧಿ ಮಳಿಗೆಯನ್ನು ಆರಂಭಿಸುವಂತೆ ಅವರು ಆಗ್ರಹಿಸಿದರು.

ADVERTISEMENT

ಕಬ್ಬು ಬೆಳೆಗಾರ ರೈತ ಮುಖಂಡ ಮಲ್ಲೇಶಪ್ಪ ಡಂಬಳ ಮಾತನಾಡಿ, ಬಡವರಿಗೆ ಆರ್ಥಿಕ ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ಅತೀ ಕಡಿಮೆ ದರದಲ್ಲಿ ಔಷಧ ದೊರೆಯಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳನ್ನು ಆರಂಭಿಸಿ ರಿಯಾಯ್ತಿ ದರದಲ್ಲಿ ಒಳ್ಳೆಯ ಗುಣಮಟ್ಟದ ಔಷಧಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಈಗ ಸರ್ಕಾರ ಏಕಾಏಕಿ ಬಾಗಿಲು ಬಂದ್ ಮಾಡಿರುವ ಕ್ರಮದಿಂದ ಬಡರೋಗಿಗಳು ಪರದಾಡುವಂತಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಗಳು ಸರ್ಕಾರಕ್ಕೆ ವಾಸ್ತವ ತೊಂದರೆ ತಿಳಿಸುವ ಮೂಲಕ ಜನೌಷಧಿ ಕೇಂದ್ರ ಪುನರ್ ಆರಂಭಿಸುವಂತೆ ಒತ್ತಾಯಿಸಿದರು. ಅಲ್ಲದೆ ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮುಖಂಡರಾದ ಈಶ್ವರ ಮಠದ, ಮಂಜುನಾಥ ಬೋವಿ, ಶಂಕ್ರಪ್ಪ ಮುದಗಲ್ಲ, ಶಿವರಾಜ ಬನ್ನಿಹಳ್ಳಿ, ಸಂತೋಷ ಬಡ್ನಿಯವರ, ಚಂದ್ರು ದೇಸಾಯಿ, ಮಂಜುನಾಥ ಕಾಟೇನಹಳ್ಳಿ, ಬಸವರಾಜ ಕಲಕಟ್ಟಿ, ಭೀಮನಗೌಡ್ರ ಬಂಡಿಗೌಡ್ರ, ಡಿ.ಐ.ಬಸನಗೌಡ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬಡವರ ಹಿತ ಕಾಯಬೇಕಾದ ಸರ್ಕಾರಗಳು ಕೂಡಲೇ ಜನೌಷಧಿ ಮಳಿಗೆಯನ್ನು ಆರಂಭಿಸಬೇಕು. ಈ ಕುರಿತು ಶಾಸಕರು ಉಸ್ತುವಾರಿ ಸಚಿವರು ಗಮನಹರಿಸಬೇಕು
ಮಲ್ಲೇಶಪ್ಪ ಡಂಬಳ ರೈತ ಮುಖಂಡ