ಹಾವೇರಿ: ‘ರಾಜ್ಯದಲ್ಲಿ ಇದೇ ಸೆ. 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಸಮೀಕ್ಷೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಮೀಕ್ಷೆ ಮುಗಿದ ಬಳಿಕವೂ ಏನಾದರೂ ಬದಲಾವಣೆ ಹಾಗೂ ತಿದ್ದುಪಡಿ ಇದ್ದರೆ ಅದಕ್ಕೂ ಅವಕಾಶವಿದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗಂಭೀರವಾಗಿ ಸಮೀಕ್ಷೆ ನಡೆಸುತ್ತಿಲ್ಲವೆಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅವರಿಗೆ ಕಾಲವೇ ಉತ್ತರ ನೀಡಲಿದೆ’ ಎಂದರು.
‘ರಾಜ್ಯದಲ್ಲಿ 11 ವರ್ಷಗಳಿಂದ ಜಾತಿ ಸಮೀಕ್ಷೆ ಆಗಿಲ್ಲ. ಸಮೀಕ್ಷೆಯ ವರದಿ ಮಂಡನೆಯನ್ನು ಮುಂಚೆಯೇ ಮಾಡಬೇಕಿತ್ತು. ಜಾತಿ ಗಣತಿ ವಿಚಾರದಲ್ಲಿ ನಮ್ಮದೂ ಲೋಪವಿದೆ. ಹೀಗಾಗಿ, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಹೊಸ ಗಣತಿ ಮಾಡುತ್ತಿದ್ದೇವೆ. ಆಯಾ ಜಾತಿಯವರಿಗೆ ಇನ್ನೊಂದು ಸಲ ಮನವರಿಕೆ ಮಾಡಿಕೊಡುತ್ತೇವೆ. ಎಲ್ಲರೂ ತಮ್ಮ ಜಾತಿಯನ್ನು ಸರಿಯಾಗಿ ನಮೂದಿಸುವಂತೆ ವಿನಂತಿಸುತ್ತಿದ್ದೇವೆ’ ಎಂದು ಹೇಳಿದರು.
‘ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳು ಒತ್ತಾಯ ಮಾಡುವುದು ಸಹಜ. ಎಲ್ಲರಿಗೂ ಸಚಿವ ಆಗಬೇಕೆಂಬ ಆಸೆ ಇರುತ್ತದೆ. ನಮ್ಮ ಪಕ್ಷದಲ್ಲಿ ಹಿರಿಯರು ಹೆಚ್ಚಿದ್ದಾರೆ. ಅದರಲ್ಲಿ ಸಚಿವರು ಯಾರಾಗಬೇಕು? ಎಂಬುದನ್ನು ನಮ್ಮ ವರಿಷ್ಠರು ನಿರ್ಧಾರ ಮಾಡುತ್ತಾರೆ’ ಎಂದು ತಿಳಿಸಿದರು.
ಧರ್ಮಸ್ಥಳ ವಿಚಾರದಲ್ಲ ರಾಜಕಾರಣ ಸಲ್ಲದು: ‘ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ನ್ಯಾಯಾಲಯವೇ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಇದರಲ್ಲಿ ರಾಜಕೀಯ ಮಾಡಬಾರದು’ ಎಂದು ಸತೀಶ ಜಾರಕಿಹೊಳಿ ಹೇಳಿದರು.
‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ವಿಚಾರದಲ್ಲೂ ಬಿಜೆಪಿ ವಿರೋಧ ಮಾಡುತ್ತಿದೆ. ಬಿಜೆಪಿಯವರು ಮತ ಬ್ಯಾಂಕ್ಗಾಗಿ ಪ್ರತಿಯೊಂದು ವಿಷಯವನ್ನು ವಿರೋಧಿಸುತ್ತಾರೆ. ದಸರಾ ಯಾರು ಉದ್ಘಾಟನೆ ಮಾಡಬೇಕು ಎಂಬುದನ್ನು ಸರ್ಕಾರ ನಿರ್ಧಾರ ಮಾಡುತ್ತದೆ. ಸಂವಿಧಾನ ಬೇಡ ಎನ್ನುತ್ತಿರುವವರು ಇಂದು ದೊಡ್ಡ ಕುರ್ಚಿಯಲ್ಲಿ ಕುಳಿತಿದ್ದಾರೆ’ ಎಂದರು.
‘ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಸಮುದಾಯದ ತುಷ್ಟೀಕರಣ ಮಾಡುತ್ತಿದೆ’ ಎಂಬುದಾಗಿ ಬಿಜೆಪಿ ಆರೋಪಿಸುತ್ತಿದೆ. ಆದರೆ, ಮುಸ್ಲಿಂರೂ ಇಂದು ಗುಡಿಸಲಿನಲ್ಲಿ ಇದ್ದಾರೆ. ಅವರಿಗೂ ಕುಡಿಯಲು ನೀರಿಲ್ಲ. ಶೌಚಾಲಯವಿಲ್ಲ. ನಾವು ಅವರಿಗೆ ಬಹಳ ದೊಡ್ಡದಾಗಿ ಏನು ಮಾಡಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂಬು ಕೂಗಿದವರನ್ನು ಬಂಧಿಸಲಾಗಿದೆ. ಯಾರನ್ನೂ ಹೆಚ್ಚು ಓಲೈಕೆ ಮಾಡಿಲ್ಲ. ಬಿಜೆಪಿಯವರು ಆ ರೀತಿ ಬಿಂಬಿಸುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.