ADVERTISEMENT

‘ಕರ್ನಾಟಕ ಬಂದ್‌’ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 13:30 IST
Last Updated 13 ಫೆಬ್ರುವರಿ 2020, 13:30 IST
ಹಾವೇರಿಯ ಜೆ.ಎಚ್‌.ಪಟೇಲ್‌ ವೃತ್ತದಲ್ಲಿ ಗುರುವಾರ ವಾಹನ ಸಂಚಾರ ಎಂದಿನಂತೆ ಇತ್ತು
ಹಾವೇರಿಯ ಜೆ.ಎಚ್‌.ಪಟೇಲ್‌ ವೃತ್ತದಲ್ಲಿ ಗುರುವಾರ ವಾಹನ ಸಂಚಾರ ಎಂದಿನಂತೆ ಇತ್ತು   

ಹಾವೇರಿ:ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಕನ್ನಡ ಪರ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿದ್ದ ‘ಕರ್ನಾಟಕಬಂದ್’ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಜನಜೀವನ ಎಂದಿನಂತಿದ್ದು, ಬೆಳಿಗ್ಗೆಯಿಂದಲೇ ಆಟೊ, ಬಸ್‌, ಖಾಸಗಿ ವಾಹನಗಳ ಸಂಚಾರ ಸುಗಮವಾಗಿತ್ತು.ಬಂದ್‌ನ ಚಿತ್ರಣ ಎಲ್ಲಿಯೂ ಗೋಚರಿಸಲಿಲ್ಲ. ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ, ಅಂಗಡಿ, ಶಾಪಿಂಗ್ ಮಾಲ್‌ಗಳಲ್ಲಿ ಎಂದಿನಂತೆಯೇ ವ್ಯಾಪಾರ ವಹಿವಾಟು ನಡೆದವು.ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು, ಚಿತ್ರಮಂದಿರ, ಆಸ್ಪತ್ರೆಗಳು ತೆರೆದಿದ್ದವು.

ರಾಜ್ಯ ಮಟ್ಟದ ಜಾನಪದ ಜಾತ್ರೆಗೆ ಯಾವುದೇ ಬಂದ್‌ ಪರಿಣಾಮ ಬೀರಲಿಲ್ಲ. ಹಾಗಾಗಿ ಮಧ್ಯಾಹ್ನ 3ಕ್ಕೆ ಅದ್ಧೂರಿ ಮೆರವಣಿಗೆ, ವೇದಿಕೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ADVERTISEMENT

‘ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹದಾಯಿನದಿ ನೀರಿನ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ, ಬಂದ್‌ಗೆ ಬೆಂಬಲವಿಲ್ಲ. ಇದು ನಮ್ಮ ರಾಜ್ಯ ಘಟಕದ ಅಧ್ಯಕ್ಷರ ಸೂಚನೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಮುದಿಗೌಡ್ರ ಹೇಳಿದರು.

‘ಕರ್ನಾಟಕ ಬಂದ್‌ ಮಾಡುವುದರಿಂದ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುತ್ತದೆ. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂಬ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದು ಆಟೊ ಚಾಲಕರ ಹಾಗೂ ಮಾಲೀಕರ ಸಂಘದ ಹೊನ್ನಪ್ಪ ಮಾಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.