ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು, ರೈತರ ಮುಖದಲ್ಲಿ ಹರ್ಷ ತಂದಿದೆ. ಇದರ ನಡುವೆ ಅವಘಡಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಮುಂಗಾರು ಪೂರ್ವ ಮಳೆಯಿಂದಾದ ಹಾನಿ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದು, ಸಿಡಿಲು ಬಡಿದು ಐವರು ಹಾಗೂ ಕಟ್ಟಡ ಕುಸಿದು ಒಬ್ಬರು ಮೃತಪಟ್ಟಿರುವುದಾಗಿ ದಾಖಲಿಸಿದ್ದಾರೆ.
ಹಾವೇರಿ, ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಗುಡುಗು–ಸಿಡಿಲು ಸಮೇತ ಮಳೆ ಸುರಿದಿದ್ದು, ಹಲವು ಅನಾಹುತಕ್ಕೆ ಕಾರಣವಾಗಿದೆ. ಜೋರು ಗಾಳಿ ಸಹ ಬೀಸಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.
2025ರ ಜನವರಿ 10ರಿಂದ ಮೇ 21ರವರೆಗೆ 163.9 ಮಿಲಿ ಮೀಟರ್ ಮಳೆಯಾಗಿದೆ. ಮೇ 1ರಿಂದ 20ರವರೆಗೆ 90.2 ಮಿ.ಮೀ. ವಾಡಿಕೆ ಮಳೆಯಿತ್ತು. ಆದರೆ, 163.2 ಮಿ.ಮೀ. ಮಳೆಯಾಗಿದೆ. ಶೇ 157.38ರಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಅತ್ಯಧಿಕ ಮಳೆಯಾಗಿದ್ದು, ಹಾವೇರಿ, ಹಾನಗಲ್ ಹಾಗೂ ಬ್ಯಾಡಗಿ ನಂತರದ ಸ್ಥಾನದಲ್ಲಿವೆ. ರಾಣೆಬೆನ್ನೂರು, ಹಿರೇಕೆರೂರು, ಸವಣೂರು, ಶಿಗ್ಗಾವಿ ತಾಲ್ಲೂಕಿನಲ್ಲೂ ಉತ್ತಮ ಮಳೆ ಸುರಿದಿದೆ.
ಹಾನಗಲ್ ತಾಲ್ಲೂಕಿನ ಕಾಲ್ವೆಯಲ್ಲಾಪುರ ಗ್ರಾಮದಲ್ಲಿ ಮಳೆಯಿಂದ ಗೋಡೆ ಕುಸಿದು, ಅವಶೇಷಗಳಡಿ ಸಿಲುಕಿ ರೋಹನ್ ಮಂಜುನಾಥ್ ಹರಿಜನ ಎಂಬ ಬಾಲಕ ಮೃತಪಟ್ಟಿದ್ದನು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಈಗಾಗಲೇ ₹5 ಲಕ್ಷ ಪರಿಹಾರ ನೀಡಿದ್ದಾರೆ.
ಶಿಗ್ಗಾವಿ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ, ಹಿರೇಕೆರೂರು ತಾಲ್ಲೂಕಿನ ಡಮಳ್ಳಿ ಗ್ರಾಮದ ನಾಗಪ್ಪ ಬಸವಣ್ಣೆಪ್ಪ ಕುಸಗೂರು, ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಗ್ರಾಮದ ಸುನೀಲ ಸುರೇಶಪ್ಪ ಕಾಳೇರ, ಹಾನಗಲ್ ತಾಲ್ಲೂಕಿನ ಕೊಂಡೋಜಿ ಗ್ರಾಮದ ಮರಿಯವ್ವ ನೀಲಪ್ಪ ನಾಯ್ಕರ್ ಹಾಗೂ ಹಾವೇರಿ ಜಿಲ್ಲೆಯ ಹೊಸರಿತ್ತಿಯ ಹನುಮಂತಗೌಡ ರಾಮನಗೌಡ್ರ ಅವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸಾವಿನ ಬಗ್ಗೆ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ನಾಲ್ವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಿದ್ದಾರೆ. ಇನ್ನೊಬ್ಬರ ಸಾವಿನ ಕುರಿತು ಪರಿಶೀಲನೆ ಮುಂದುವರಿದಿದೆ.
ಜಿಲ್ಲೆಯಲ್ಲಿ ಸಿಡಿಲು ಆಘಾತಗಳು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಮಳೆಯ ಸಂದರ್ಭದಲ್ಲಿ ಸಿಡಿಲಿನ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂಬುದು ಅಧಿಕಾರಿಗಳ ಸಲಹೆ.
53 ಜಾನುವಾರು ಸಾವು: ‘ಮೇ 20ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಒಟ್ಟು 53 ಜಾನುವಾರುಗಳು ಮೃತಪಟ್ಟಿವೆ. ಎರಡು ದೊಡ್ಡ ಹಾಗೂ 51 ಸಣ್ಣ ಜಾನುವಾರುಗಳು ಅಸುನೀಗಿವೆ. ಇವುಗಳಿಗೆ ಪರಿಹಾರವಾಗಿ ₹ 2.06 ಲಕ್ಷ ಪಾವತಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
87 ಮನೆಗಳಿಗೆ ಹಾನಿ: ಮಳೆಯಿಂದಾಗಿ ಜಿಲ್ಲೆಯ 87ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ತಹಶೀಲ್ದಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತ್ತು. ಅಂತಿಮವಾಗಿ ಒಂಬತ್ತು ಅರ್ಜಿಗಳನ್ನು ಅಂಗೀಕರಿಸಲಾಗಿದೆ. 66 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 12 ಅರ್ಜಿಗಳ ಪರಿಶೀಲನೆ ಬಾಕಿ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
190.98 ಹೆಕ್ಟೇರ್ ಬೆಳೆ ಹಾನಿ: ಜಿಲ್ಲೆಯಲ್ಲಿ ಮೆಕ್ಕೆಜೋಳ, ಬಾಳೆ, ಹೂಕೋಸು ಹಾಗೂ ಇತರೆ ಬೆಳೆಯನ್ನು ಬೆಳೆಯಲಾಗಿತ್ತು. ಮಳೆಯಿಂದಾಗಿ 190.98 ಹೆಕ್ಟೇರ್ನಲ್ಲಿದ್ದ ಬೆಳೆಗೆ ಹಾನಿಯಾಗಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, 149.57 ಹೆಕ್ಟೇರ್ ಬೆಳೆ ಹಾನಿಯಾಗಿರುವುದಾಗಿ ವರದಿ ನೀಡಿದ್ದಾರೆ.
2,405 ವಿದ್ಯುತ್ ಕಂಬಗಳಿಗೆ ಹಾನಿ: ಮುಂಗಾರು ಪೂರ್ವ ಮಳೆಯಿಂದಾಗಿ ಜಿಲ್ಲೆಯಲ್ಲಿ 2,405 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಐದು ಕಡೆ ಶಾಲೆ–ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಮೂಲಸೌಕರ್ಯಗಳ ಹಾನಿಯಿಂದ ಒಟ್ಟು ₹299.55 ಲಕ್ಷದಷ್ಟು ಹಾನಿ ಉಂಟಾಗಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಡಿಲು; ಇರಲಿ ಎಚ್ಚರ
* ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಗುಡುಗು ಸಿಡಿಲು ಕಾಣಿಸಿಕೊಳ್ಳುತ್ತದೆ
* ಗುಡುಗು–ಸಿಡಿಲು ಸಮಯದಲ್ಲಿ ಹೊರಹೋಗದಿರುವುದು ಒಳಿತು. ಮೊಬೈಲ್ ಫೋನ್ಗೆ ಬರುವ ಹವಾಮಾನ ಮುನ್ಸೂಚನೆ ಹಾಗೂ ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್ ಸಂದೇಶಗಳನ್ನು ಗಮನಿಸಬೇಕು
* ರೈತರು ಹೊಲ–ಗದ್ದೆಗಳಿಗೆ ಹಾಗೂ ಜಾನುವಾರು ಮೇಯಿಸಲು ಹೋಗಬಾರದು. ಲೋಹದ ತಗಡುಗಳನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ
* ಬೆಟ್ಟಗಳು ಪರ್ವತ ಶಿಖರಗಳಂತಹ ಎತ್ತರದ ಪ್ರದೇಶಗಳಲ್ಲಿ ನಿಲ್ಲಬಾರದು. ಪ್ರವಾಹ ಬಾರದಂತಹ ತಗ್ಗು ಪ್ರದೇಶಗಳಲ್ಲಿ ನಿಲ್ಲಬೇಕು
* ಕೆರೆ ನದಿಗಳಿಂದ ದೂರವಿರಬೇಕು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ ಮೊಬೈಲ್ ಫೋನ್ ಟವರ್ ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರಬೇಕು
* ಗುಡುಗು–ಸಿಡಿಲು ಸಂದರ್ಭದಲ್ಲಿ ವಾಹನ ಚಾಲನೆ ಮಾಡಬಾರದು. ಗುಂಪಿನಲ್ಲಿದ್ದರೆ ಅಂತರ ಕಾಯ್ದುಕೊಳ್ಳಬೇಕು. ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು
* ಸಿಡಿಲನ್ನು ಆಕರ್ಷಿಸುವ ವಿದ್ಯುತ್ ಟೆಲಿಫೋನ್ ಕಂಬ ಮರಗಳ ಕೆಳಗೆ ಆಶ್ರಯ ಪಡೆಯಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.