ADVERTISEMENT

ಮಾದಕ ವಸ್ತುಗಳಿಂದ ಯುವಜನರು ದೂರವಿರಿ: ನ್ಯಾಯಾಧೀಶ ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:49 IST
Last Updated 23 ಸೆಪ್ಟೆಂಬರ್ 2022, 13:49 IST
ಹಾವೇರಿ ನಗರದ ಜಿ.ಎಚ್.ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಕ ವಸ್ತು ವ್ಯಸನ ಮತ್ತು ದುರ್ಬಳಕೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು ಮಾತನಾಡಿದರು  
ಹಾವೇರಿ ನಗರದ ಜಿ.ಎಚ್.ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಕ ವಸ್ತು ವ್ಯಸನ ಮತ್ತು ದುರ್ಬಳಕೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು ಮಾತನಾಡಿದರು     

ಹಾವೇರಿ: ‘ಅತಿಯಾದ ಹಣ ಗಳಿಕೆ ಮೋಹಕ್ಕೆ ಬಿದ್ದು ಕೆಲವರು ಶಾಲೆ- ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಗಾಂಜಾ, ಅಫೀಮು ಹಾಗೂ ಡ್ರಗ್ಸ್‌ನಂತಹ ಮಾದಕ ವಸ್ತು ಮಾರಾಟ ಮಾಡಿ ಯುವಕರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಂಥವರು ಕಂಡು ಬಂದಲ್ಲಿ ವಿದ್ಯಾರ್ಥಿಗಳು ಹತ್ತಿರ ಠಾಣೆಗಳಿಗೆ ದೂರು ನೀಡಬೇಕು’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು ಹೇಳಿದರು.

ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಕಾರ್ಯಕ್ರಮ ವಿಭಾಗ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ನಗರದ ಜಿ.ಎಚ್.ಕಾಲೇಜುಸಭಾಂಗಣದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವ್ಯಸನ ಮತ್ತು ದುರ್ಬಳಕೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಟ್ಟ ಆಲೋಚನೆ ಹಾಗೂ ಕೆಟ್ಟವರ ಸಂಘ ಮಾಡಿ ಬದುಕನ್ನು ಹಾಳು ಮಾಡಿಕೊಳ್ಳದೆ. ನಿಮ್ಮ ಪಾಲಕರ ಆಸೆಯಂತೆ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವದಿಂದ ಬದುಕಿ ಇತರರಿಗೆ ಮಾದರಿಯಾಗಿ ಎಂದು ಹೇಳಿದರು.

ADVERTISEMENT

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪಿ.ಸಿ.ಬಣಕಾರ ಮಾತನಾಡಿ, ಮಾದಕ ವಸ್ತುಗಳಿಂದ ದೂರವಿದ್ದು ಪಾಲಕರ ಪ್ರೀತಿ ಪಾತ್ರರಾಗಿ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಇತರರಿಗೂ ಮಾದರಿಯಾಗಿ ಬದುಕು ನಡೆಸಿರಿ’ ಎಂದು ಹೇಳಿದರು.

ಸಿ.ಪಿ.ಐ ಸಂತೋಷ ಪಾಟೀಲ್ ಮಾತನಾಡಿ, ಶಾಲಾ- ಕಾಲೇಜುಗಳಲ್ಲಿ ಹಾಗೂ ಸುತ್ತಮುತ್ತ ಯಾರಾದರೂ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಮೊ: 9916957863 ಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಒಂದು ಕರೆ ಹಲವಾರು ಯುವಕರ ಬದುಕನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್. ಹಾವನೂರ ಮಾತನಾಡಿ, ಜಾನಪದ ಹಾಡಿನ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತು ವ್ಯಸನ ಮತ್ತು ದುರ್ಬಳಕೆ ಕುರಿತು ಅರಿವು ಮೂಡಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋ ವೈದ್ಯ ಡಾ.ವಿಜಯಕುಮಾರ ಬಳಿಗಾರ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು, ದುಶ್ಚಟಗಳ ದುಷ್ಪರಿಣಾಮ ಮತ್ತು ನಿವಾರಣೆ ವಿಷಯ ಕುರಿತು ಉಪನ್ಯಾಸ ನೀಡಿದರು. ಜಿ.‌ಎಚ್.ಕಾಲೇಜ್ ಪ್ರಾಚಾರ್ಯ ಜಿ.ಆರ್.ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಡಾ.ಚನ್ನಬಸಯ್ಯ ವಿರಕ್ತಮಠ, ಪಿ.ಎಸ್.ಐ ಬಸವರಾಜ ಬೆಟಗೇರಿ, ಪ್ರಾಧ್ಯಾಪಕ ಎನ್.ಎ.ಗಾಣಿಗೇರ, ಎಸ್.ಜಿ. ಹುಣಸಿಕಟ್ಟಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.