
ಹಾವೇರಿ: ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿ ನೀಡುವ ವಿಚಾರವಾಗಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಮುಖಂಡರು, ಕೇಂದ್ರ ಸರ್ಕಾರದ ನಾಯಕರನ್ನು ನವದೆಹಲಿಯಲ್ಲಿ ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸ್ವಾಮೀಜಿ ನೇತೃತ್ವದಲ್ಲಿ ನವದೆಹಲಿಗೆ ತೆರಳಿದ್ದ ನಿಯೋಗ, ಮೀಸಲಾತಿ ವಿಚಾರವಾಗಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ನಾಯಕರ ಜೊತೆ ಚರ್ಚಿಸಿದ್ದಾರೆ.
ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಎಚ್.ಡಿ. ದೇವೇಗೌಡ, ಬಸವರಾಜ ಬೊಮ್ಮಾಯಿ, ಬಿ.ವೈ. ರಾಘವೇಂದ್ರ, ಬುಡಕಟ್ಟು ವ್ಯವಹಾರ ಸಚಿವ ಜುವೆಲ್ ಓರಾಮ ಅವರನ್ನು ನಿಯೋಗ ಭೇಟಿ ಮಾಡಿದೆ.
‘ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿ ನೀಡುವಂತೆ ಆಗ್ರಹಿಸಿ ಸಮಾಜದ ಎಲ್ಲ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 2021ರಲ್ಲಿ ಹೋರಾಟ ಆರಂಭಿಸಲಾಗಿತ್ತು. ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಸಮಾವೇಶದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ನಿರಂತರ ಪ್ರಯತ್ನ ಮತ್ತು ಒತ್ತಡದಿಂದಾಗಿ ಅಂದಿನ ಸರ್ಕಾರ 2023ರ ಮಾರ್ಚ್ 24ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು. ನಂತರ ಬಂದ ಸರ್ಕಾರ, ಜುಲೈ 20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು’ ಎಂದು ಪ್ರಕಟಣೆ ತಿಳಿಸಿದೆ.
‘ಶಿಫಾರಸು ಪರಿಶೀಲಿಸಿದ್ದ ಕೇಂದ್ರ ಸರ್ಕಾರ, ಮತ್ತೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆಯ ಮಾಹಿತಿ ಕೇಳಿತ್ತು. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಸೂಕ್ತ ಮಾಹಿತಿ ಕಳುಹಿಸಿದೆ. ಕುರುಬ ಸಮಾಜದ ಎಸ್.ಟಿ. ಮೀಸಲಾತಿ ವರದಿಯು ಕೇಂದ್ರ ಸರ್ಕಾರದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್ಜಿಐ) ಮುಂದಿದೆ. ಅದೇ ಕಾರಣಕ್ಕೆ ಸ್ವಾಮೀಜಿ ನೇತೃತ್ವದ ನಿಯೋಗ, ಕೇಂದ್ರ ಸರ್ಕಾರದ ನಾಯಕರನ್ನು ಭೇಟಿಯಾಗಿದೆ. ಮೀಸಲಾತಿ ಜಾರಿಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.