ಕುಮಾರಪಟ್ಟಣ: ಸಮೀಪದ ಖಂಡೇರಾಯನಹಳ್ಳಿ ಗ್ರಾಮದ ಸಿದ್ಧಾರೂಢ ಮಠದ ಬಳಿ ಬುಧವಾರ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ತಾಂಡಾದ ಮನೆಗಳ ತೆರವು ಕಾರ್ಯಾಚರಣೆ ನಡೆಸಿದರು. ತೆರವಿಗೆ ಸುತರಾಂ ಒಪ್ಪದ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತಿನ ವಾಕ್ಸಮರ ನಡೆದು ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿತು.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಬೆನ್ನಲ್ಲೇ ಸ್ಥಳದಲ್ಲೇ ತಿಕಾಣಿ ಹೂಡಿದ್ದ 200ಕ್ಕೂ ಹೆಚ್ಚು ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇದ್ಯಾವುದನ್ನು ಲೆಕ್ಕಿಸದ ಇಲ್ಲಿನ ಮಹಿಳೆಯರು, ಯುವಕರು ಮನೆಗಳ ಜಾಗ ಬಿಟ್ಟು ಕೊಡುವುದಿಲ್ಲ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸ. ನಂ 14ರಲ್ಲಿ 20 ಮನೆಗಳಿದ್ದು, ಸುಮಾರು 30 ವರ್ಷಗಳಿಂದ ಇದೇ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ಕಳೆದ 10 ವರ್ಷಗಳಿಂದ ಜಾಗಕ್ಕಾಗಿ ಸಿದ್ಧಾರೂಢ ಮಠದ ಸಮಿತಿ ಹಾಗೂ ಇಲ್ಲಿನ ನಿವಾಸಿಗಳ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಯಾವ ನೋಟೀಸು ನೀಡದೆ ಮಹಿಳೆಯರ, ಮಕ್ಕಳು ಎನ್ನದೆ ದೌರ್ಜನ್ಯ ಎಸಗಿದ್ದಾರೆ. ಜೆಸಿಬಿ ಮೂಲಕ ಎರಡು ಮನೆಗಳನ್ನು ಕೆಡವಲಾಗಿದೆ ಎಂದು ಮಹಿಳೆಯರು ದೂರಿದರು.
ಬಡವರ ಮೇಲೆ ಅಮಾನುಷವಾಗಿ ದೌರ್ಜನ್ಯ ವೆಸಗಿದ ಎಲ್ಲಾ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇಥ್ಯರ್ತವಾಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ. ನಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಮುಖ್ಯಮಂತ್ರಿಗಳ ಮನೆಯ ಮುಂದೆ ಬದುಕುವ ಹಕ್ಕಿಗಾಗಿ ಧರಣಿ ಕೂರುತ್ತೇವೆ. ನಮಗೆ ಜಾಗ ಸಿಗದಿದ್ದರೆ ಇದೇ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೆಲ ಯುವಕರು ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು
ಈಗಾಗಲೇ ನ್ಯಾಯಾಲಯದ ಮೂಲಕವೇ ಪ್ರಕರಣ ದಾಖಲಿಸಲಾಗಿದೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಸ್ಥಳೀಯ ಶಾಸಕರು ನ್ಯಾಯ ಒದಗಿಸುವ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ಯಾವುದೇ ನೋಟಿಸ್ ನೀಡದೆ ಕಾಣದ ವ್ಯಕ್ತಿಗಳ ಕೈವಾಡದಿಂದ ಏಕಾಏಕಿ ಬಡವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.