ಪ್ರಜಾವಾಣಿ ವಾರ್ತೆ
ರಾಣೆಬೆನ್ನೂರು: ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ದಿನನಿತ್ಯ ಬಳಸಬೇಕು. ಪ್ಲಾಸ್ಟಿಕ್ ಮುಕ್ತ ಭಾರತ ಪ್ರತಿಯೊಬ್ಬ ನಾಗರಿಕನ ಧ್ಯೇಯವಾಗಲಿ ಎಂದು ಗೋವಾ ಮತ್ತು ಕರ್ನಾಟಕ ರಾಜ್ಯಗಳ ರೋಟರಿ ಸಂಸ್ಥೆಯ ಗೌರ್ನರ್ ಬಬನ್ ದೇಶಪಾಂಡೆ ಹೇಳಿದರು.
ನಗರದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಮೈದಾನದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ರೋಟರಿ ಆಂಗ್ಲ ಮಾಧ್ಯಮ ಶಾಲೆ, ರೋಟರಿ ವಿಜ್ಞಾನ ಮತ್ತು ಪದವಿಪೂರ್ವ ಕಾಲೇಜು, ರೋಟರಿ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಮತ್ತು ಮಕ್ಕಳಿಗೆ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತು ವಾತಾವರಣ ವೈಪರಿತ್ಯರಿಂದ ಕೊನೆಯಾಗುವ ಮುನ್ನ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು. ಮನೆಗೊಂದು ಮರ, ಊರಿಗೊಂದು ವನ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ತಮ್ಮ ಜೀವನದ ವಿಶೇಷ ದಿನಗಳನ್ನು ಸಸಿ ನೆಡುವ ಮೂಲಕ ಪ್ರತಿ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಬೇಕು ಎಂದು ತಿಳಿಸಿದರು.
ಪರಿಸರ ಪ್ರೇಮಿ ಕರಿಬಸಪ್ಪ ಕಾಗಿನೆಲೆ ಮಾತನಾಡಿ, ನಗರೀಕರಣ, ಐಷಾರಾಮಿ ಜೀವನಕ್ಕೆ ಬೇಕಾದ ಮರಮುಟ್ಟುಗಳ ತಯಾರಿಕೆಯಲ್ಲಿ ಕೈಗಾರಿಕೆಗಳು ಯಥೇಚ್ಛವಾಗಿ ಕಾಡನ್ನುನ ನಾಶ ಮಾಡುತ್ತಾ ಸಾಗಿವೆ. ಪ್ರಕೃತಿ ಮೇಲೆ ಎಸಗುವ ದುಷ್ಕೃತ್ಯಕ್ಕೆ ಪ್ರತಿಯೊಬ್ಬರೂ ಕಾರಣರು. ಹೀಗಾಗಿ ಗಿಡ–ಮರಗಳ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಟಿ.ಎಸ್. ವಿಜಯಲಕ್ಷ್ಮಿ ರಾಮಚಂದ್ರ, ಪರಿಸರ ಪ್ರೇಮಿ ಕರಬಸಪ್ಪ ಕಾಗಿನೆಲೆ ಅವರನ್ನು ರೋಟರಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಟ್ಯಾಗೋರ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ. ಬಸವರಾಜ ಕೆಲಗಾರ, ರೋಟರಿ ಸಂಸ್ಥೆ ಅಧ್ಯಕ್ಷ ಡಾ ಎಂ.ಎಂ. ಅನಂತ ರೆಡ್ಡಿ, ಕಾರ್ಯದರ್ಶಿ ಜಿ.ಎಸ್. ರಾಮಚಂದ್ರ, ಜಿ.ಜಿ. ಹೊಟ್ಟಿಗೌಡರ, ಜಗದೀಶ ಕಲ್ಯಾಣಿ, ವನಸಿರಿ ಸಂಸ್ಥೆಯ ಸಂಚಾಲಕ ಎಸ್.ಡಿ. ಬಳಿಗಾರ, ಸುಜಿತ್ ಜಂಬಿಗಿ, ವೀರನಗೌಡ ಪೊಲೀಸ್ ಗೌಡ್ರ, ಎಂ. ಆರ್. ಪಾಟೀಲ, ವಾಸುದೇವ ಗುಪ್ತಾ ಅರವಿಂದ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.