ADVERTISEMENT

ಚುನಾವಣಾ ಕಣಕ್ಕೆ ಸ್ವಾಮೀಜಿ ಬಿಜೆಪಿಗೆ ಮತ ವಿಭಜನೆ ಭೀತಿ

ಹಿರೇಕೆರೂರು ವಿಧಾನಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:13 IST
Last Updated 1 ಡಿಸೆಂಬರ್ 2019, 13:13 IST
ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ
ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ   

ಹಾವೇರಿ: ಹಿರೇಕೆರೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ರಟ್ಟೀಹಳ್ಳಿ ಕಬ್ಬಿಣಕಂಥಿಮಠದಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಣಕ್ಕಿಳಿದಿದ್ದು, ಬಿಜೆಪಿಗೆ ಮತ ವಿಭಜನೆಯ ಭೀತಿ ಎದುರಾಗಿದೆ.

ಲಿಂಗಾಯತ ಸಮುದಾಯದ ಪ್ರಾಬಲ್ಯವುಳ್ಳ ಈ ಕ್ಷೇತ್ರದಲ್ಲಿ, ಸ್ವಾಮೀಜಿ ರಂಗಪ್ರವೇಶವು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರ ನಿದ್ದೆಗೆಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮೊದಲು ಉಜಿನೆಪ್ಪ ಕೋಡಿಹಳ್ಳಿ ಅವರಿಗೆ ಟಿಕೆಟ್ ನೀಡಿದ್ದ ಜೆಡಿಎಸ್, ಅಚ್ಚರಿಯ ಬೆಳವಣಿಗೆಯಲ್ಲಿ ಭಾನುವಾರ ರಾತ್ರಿ ಸ್ವಾಮೀಜಿಗೆ ಅವಕಾಶ ಕಲ್ಪಿಸಿದೆ. ಸೋಮವಾರ ಅವರು ತಮ್ಮ ಭಕ್ತ ಸಮುದಾಯದ ಬೆಂಬಲದೊಂದಿಗೆ ನಾಮಪತ್ರವನ್ನೂ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ, ಸ್ಥಳೀಯ ಬಿಜೆಪಿ ಮುಖಂಡ ಯು.ಬಿ.ಬಣಕಾರ ಸೋಮವಾರ ಬೆಳಿಗ್ಗೆ ಸ್ವಾಮೀಜಿ ಬಳಿ ತೆರಳಿ, ಚುನಾವಣೆಗೆ ಸ್ಪರ್ಧಿಸದಂತೆ ಮನವಿ ಮಾಡಿದರು. ಆದರೆ, ಆ ಮನವೊಲಿಕೆಗೆ ಅವರು ಒಪ್ಪಲಿಲ್ಲ ಎನ್ನಲಾಗಿದೆ.

ADVERTISEMENT

‘ಬಿ.ಸಿ.ಪಾಟೀಲರಿಗೆ ಬಿಸಿ ಮುಟ್ಟಿಸಲು ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ತಂತ್ರವನ್ನೇಜೆಡಿಎಸ್ ರೂಪಿಸಿದೆ. ಶಿವಾಚಾರ್ಯ ಸ್ವಾಮೀಜಿ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯರು. ರಟ್ಟೀಹಳ್ಳಿಯಲ್ಲಿನ ಬಹುತೇಕ ಲಿಂಗಾಯತ ಮತಗಳು ಅವರ ತೆಕ್ಕೆಗೇ ಬೀಳಬಹುದು’ ಎಂಬುದು ಸ್ಥಳೀಯ ಮುಖಂಡರ ವಿಶ್ಲೇಷಣೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿ.ಸಿ.ಪಾಟೀಲ, ‘ಸ್ವಾಮೀಜಿ ಸ್ಪರ್ಧೆ ನನ್ನ ಗೆಲುವಿಗೆ ಯಾವ ರೀತಿಯಲ್ಲೂ ಅಡ್ಡಿಯಾಗದು’ ಎಂದಿದ್ದಾರೆ.

ಸ್ವಾಮೀಜಿ ಆಸ್ತಿ ವಿವರ:ಚರಾಸ್ತಿ ₹ 23 ಲಕ್ಷ; ಸ್ಥಿರಾಸ್ತಿ ₹ 1.90 ಕೋಟಿ ಎಂದು ಘೋಷಿಸಿದ್ದಾರೆ. ಆಸ್ತಿ ಪಿತ್ರಾರ್ಜಿತವಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.