ADVERTISEMENT

‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕೆ ಪಣ

ಜನಜಾಗೃತಿ ಪಾದಯಾತ್ರೆಯಲ್ಲಿ ಮಹಿಳೆಯರ ಕಣ್ಣೀರು; ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ದಿಟ್ಟ ಹೆಜ್ಜೆ

ಸಂತೋಷ ಜಿಗಳಿಕೊಪ್ಪ
Published 26 ಡಿಸೆಂಬರ್ 2025, 3:16 IST
Last Updated 26 ಡಿಸೆಂಬರ್ 2025, 3:16 IST
ಸದಾಶಿವ ಸ್ವಾಮೀಜಿ 
ಸದಾಶಿವ ಸ್ವಾಮೀಜಿ    

ಹಾವೇರಿ: ಇಲ್ಲಿಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಬಾರಿ ಗ್ರಾಮೀಣ ಭಾಗದ ಮಹಿಳೆಯರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕಾಗಿ ಮಠ ಪಣ ತೊಟ್ಟಿದೆ.

‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ಧೀಕ್ಷೆ’ ಎಂಬ ಘೋಷವಾಕ್ಯದಡಿ 70 ಹಳ್ಳಿಗಳಲ್ಲಿ ಸದಾಶಿವ ಸ್ವಾಮೀಜಿಯವರು ಜನಜಾಗೃತಿ ಪಾದಯಾತ್ರೆ ನಡೆಸಿದ್ದಾರೆ. ಪ್ರತಿ ಹಳ್ಳಿಯಲ್ಲಿಯೂ ಶೇ 30ರಷ್ಟು ಮಂದಿ ದುಶ್ಚಟಗಳಿಗೆ ದಾಸರಾಗಿರುವುದನ್ನು ಕಂಡು ಮರುಕಪಟ್ಟಿದ್ದಾರೆ. ಮದ್ಯ, ಗುಟ್ಕಾ, ತುಂಬಾಕು ಉತ್ಪನ್ನಗಳ ದಾಸರಾಗಿರುವ ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ಪಾದಯಾತ್ರೆಯುದ್ದಕ್ಕೂ ತಿಳಿವಳಿಕೆ ಮೂಡಿಸಿದ್ದಾರೆ.

ಸ್ವಾಮೀಜಿ ಅವರನ್ನು ಭಕ್ತಿಯಿಂದ ಸ್ವಾಗತಿಸಿದ್ದ ಮಹಿಳೆಯರು, ‘ದುಶ್ಚಟಗಳ ವಿರುದ್ಧ ಯಾರೊಬ್ಬರೂ ಹೋರಾಟ ಮಾಡಿರಲಿಲ್ಲ. ಈಗ ನೀವು ದೇವರ ರೂಪದಲ್ಲಿ ಬಂದಿದ್ದೀರಾ. ನಮ್ಮ ಗಂಡಂದಿರು ಹಾಗೂ ಮಕ್ಕಳು, ಮದ್ಯದ ಚಟಕ್ಕೆ ಅಂಟಿಕೊಂಡು ನಿತ್ಯವೂ ಜಗಳ ಮಾಡುತ್ತಾರೆ. ಅವರ ಆರೋಗ್ಯವೂ ಹಾಳಾಗಿದೆ. ಆರ್ಥಿಕವಾಗಿಯೂ  ಕುಟುಂಬ ಕುಸಿದಿದೆ. ನಮ್ಮ ಹಳ್ಳಿ ಮಾತ್ರವಲ್ಲದೇ ಎಲ್ಲ ಕಡೆಯೂ ಇದೇ ಗೋಳಿದೆ. ಇಡೀ ರಾಜ್ಯದಲ್ಲಿಯೇ ಮದ್ಯ ನಿಷೇಧ ಮಾಡಿದರೆ, ನಮ್ಮಂಥ ಮಹಿಳೆಯರು ಬದುಕುತ್ತಾರೆ’ ಎಂದು ಗೋಳು ತೋಡಿಕೊಂಡಿದ್ದರು.

ADVERTISEMENT

ದುಶ್ಚಟಗಳಿಂದಾಗಿ ಯುವಕರಿಗೆ ಕನ್ಯೆ ಸಿಗದ ಬಗ್ಗೆಯೂ ಕಣ್ಣೀರಿಟ್ಟಿದ್ದ ತಾಯಂದಿರು, ‘ನನ್ನ ಮಗನಿಗೆ ಮದುವೆ ವಯಸ್ಸಾಗಿದೆ. ಮದ್ಯ ಕುಡಿಯುವುದರಿಂದ ಯಾರೊಬ್ಬರೂ ಕನ್ಯೆ ಕೊಡುತ್ತಿಲ್ಲ. ಜಮೀನು ಇದ್ದರೂ ಮಗ ಕೆಲಸಕ್ಕೆ ಹೋಗುತ್ತಿಲ್ಲ’ ಎಂದು ಗೋಳಾಡಿದ್ದರು.

ತಾಯಂದಿರ ಅಳಲು ಆಲಿಸಿದ್ದ ಸದಾಶಿವ ಸ್ವಾಮೀಜಿ, ‘ದುಶ್ಚಟಗಳಿಂದ ಆಗುತ್ತಿರುವ ಪರಿಣಾಮವನ್ನು ಕಣ್ಣಾರೆ ಕಂಡಿದ್ದೇನೆ. ಧಾರ್ಮಿಕ ಸಂಸ್ಕಾರದಿಂದ ವಿಮುಖವಾಗುತ್ತಿರುವ ಯುವಜನತೆ, ದುಶ್ಚಟಗಳ ದಾಸರಾಗಿ ಆರೋಗ್ಯ ಹಾಗೂ ಆರ್ಥಿಕವಾಗಿ ಬಲಹೀನರಾಗುತ್ತಿದ್ದಾರೆ. ಈಗ ತಿಳಿವಳಿಕೆ ಹೇಳಿ, ದುಶ್ಚಟ ಬಿಡಿಸುತ್ತೇವೆ. ಮುಂಬರುವ ದಿನಗಳಲ್ಲಿ, ‘ಮದ್ಯ ಮುಕ್ತ ರಾಜ್ಯ’ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

‘ಮದ್ಯ ಮುಕ್ತ ರಾಜ್ಯ’ ನಿರ್ಮಾಣಕ್ಕೆ ಪಣ ತೊಟ್ಟಿರುವ ಸದಾಶಿವ ಸ್ವಾಮೀಜಿ ಅವರಿಗೆ ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೇರೂರ ಗುಬ್ಬಿ ನಂಜುಂಡೇಶ್ವರ ಸ್ವಾಮೀಜಿ ಸೇರಿ ಹಲವರು ಬೆಂಬಲವಾಗಿ ನಿಂತಿದ್ದಾರೆ. ಜಾತ್ರಾ ಮಹೋತ್ಸವದ ವೇದಿಕೆ ಮೂಲಕವೇ ರಾಜ್ಯ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಲು ಸಿದ್ಧರಾಗಿದ್ದಾರೆ.

ಮದ್ಯ ಮುಕ್ತವಾದರೆ ಮಾತ್ರ ರಾಮರಾಜ್ಯ: ‘ಹುಕ್ಕೇರಿಮಠದೊಂದಿಗೆ ಸರ್ವಧರ್ಮದ ಭಕ್ತರ ಅವಿನಾಭಾವ ಸಂಬಂಧವಿದೆ. ಯುವಜನತೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸಲು ನಡೆಸಿದ ಪಾದಯಾತ್ರೆಯಿಂದ ಸಾಕಷ್ಟು ಅನುಭವವಾಗಿದೆ. ಮದ್ಯ ಮುಕ್ತವಾದರೆ ಮಾತ್ರ ಕಲ್ಯಾಣ ರಾಜ್ಯ ಹಾಗೂ ರಾಮರಾಜ್ಯ ನಿರ್ಮಾಣವಾಗಲಿದೆ. ಜಾತ್ರೆ ವೇದಿಕೆ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದು ಸದಾಶಿವ ಸ್ವಾಮೀಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಯಾವುದೇ ಹಳ್ಳಿಗೆ ಹೋದರೂ, ‘ನಮ್ಮೂರಲ್ಲಿ ಮದ್ಯ ಮಾರಾಟ ನಿಲ್ಲಿಸಿ. ಶಾಸಕ, ಸಚಿವ, ಜಿಲ್ಲಾಧಿಕಾರಿಗೆ ಹೇಳಿ’ ಎಂದೇ ಮಹಿಳೆಯರು ಹೇಳುತ್ತಿದ್ದರು. ಒಂದೊಂದು ಹಳ್ಳಿಯಲ್ಲಿ ಶೇ 25ರಿಂದ ಶೇ 30ರಷ್ಟು ಮಂದಿ ದುಶ್ಚಟಗಳಿಗೆ ದಾಸರಾಗಿದ್ದಾರೆ. ಆಧುನಿಕ ಆಡಂಬರಕ್ಕೆ ಮಾರು ಹೋಗುತ್ತಿರುವ ಯುವಜನತೆ, ಧಾರ್ಮಿಕತೆಯಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಧಾರ್ಮಿಕತೆಯತ್ತ ಸೆಳೆದು ಸಂಸ್ಕಾರ ಬೆಳೆಸುವ ಪ್ರಯತ್ನ ನಿರಂತರವಾಗಿ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.