ಹಾವೇರಿ/ರಾಣೆಬೆನ್ನೂರು: ಜಿಲ್ಲೆಯ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ಮಾಡಿದ್ದು, ಇಬ್ಬರೂ ಅಕ್ರಮವಾಗಿ ಗಳಿಸಿದ್ದ ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ರಾಣೆಬೆನ್ನೂರು ತಾಲ್ಲೂಕಿನ ಕಂದಾಯ ನಿರೀಕ್ಷಕ ಅಶೋಕ ಶಂಕ್ರಪ್ಪ ಅರಳೇಶ್ವರ ಅವರ ಮನೆ ಹಾಗೂ ಕಚೇರಿ ಮೇಲೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದರು.
ಮಾರುತಿನಗರದ ನಿವಾಸಿಯಾದ ಅಶೋಕ ಬಳಿ ₹ 1.35 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಆದಾಯಕ್ಕಿಂತ ಶೇ 151 ರಷ್ಟು ಅಕ್ರಮ ಆಸ್ತಿ ಗಳಿಸಿರುವುದು ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
‘ಅಶೋಕ ಬಳಿ ₹ 1.26 ಕೋಟಿ ಮೌಲ್ಯ (ಎರಡು ನಿವೇಶನ, 2 ಮನೆ ಹಾಗೂ 11.20 ಎಕರೆ ಜಮೀನು) ಸ್ಥಿರಾಸ್ತಿಯಿದೆ. ₹ 99.90 ಲಕ್ಷ ಮೌಲ್ಯದ (₹1.45 ಲಕ್ಷ ನಗದು, ₹26.02 ಲಕ್ಷ ಮೌಲ್ಯದ ಚಿನ್ನಾಭರಣ, ₹ 15 ಲಕ್ಷ ಮೌಲ್ಯದ ಕಾರು, ಇತರೆ ₹57,42,000) ಚರಾಸ್ತಿಯಿದೆ’ ಎಂದು ಪೊಲೀಸರು ಹೇಳಿದರು.
ಪ್ರಭಾರಿ ಇಒ: ಸವಣೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ–ಪ್ರಭಾರಿ) ಬಸವೇಶ ಶಿವಪ್ಪ ಶಿಡೇನೂರು ಅವರ ಬೀರೇಶ್ವರ ನಗರದಲ್ಲಿರುವ ಮನೆಯಲ್ಲಿಯೂ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದರು.
ಬಸವೇಶ ಅವರ ಬಳಿ ₹ 1.67 ಕೋಟಿ ಆಸ್ತಿ ಪತ್ತೆಯಾಗಿದ್ದು, ಆದಾಯಕ್ಕಿಂತ ಶೇ 186.17ರಷ್ಟು ಹೆಚ್ಚನ ಆಸ್ತಿ ಹೊಂದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.
‘ಬಸವೇಶ ಬಳಿ ₹ 65.07 ಲಕ್ಷ ಮೌಲ್ಯದ (6 ನಿವೇಶನ. 1 ಮನೆ) ಸ್ಥಿರಾಸ್ತಿಯಿದೆ. ₹ 99.90 ಲಕ್ಷ ಮೌಲ್ಯದ (₹4,550 ನಗದು, ₹48.97 ಲಕ್ಷ ಮೌಲ್ಯದ ಚಿನ್ನಾಭರಣ, ₹13 ಲಕ್ಷ ಮೌಲ್ಯದ ಕಾರು, ಇತರೆ ₹ 40.10 ಲಕ್ಷ) ಚರಾಸ್ತಿಯಿದೆ’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.
ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಮಧುಸೂದನ್, ‘ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಈ ದಾಳಿ ಮಾಡಲಾಗಿದೆ. ಪರಿಶೀಲನೆ ಮುಗಿದ ನಂತರವೇ ನಿಖರ ಮಾಹಿತಿ ತಿಳಿಯಲಿದೆ. ಇಬ್ಬರ ವಿರುದ್ಧವೂ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.