ADVERTISEMENT

ಪ್ರೇಮ ಪ್ರಕರಣ: ಯುವಕನ ಕೊಲೆ

ಆರೋಪಿಗಳನ್ನು ಬಂಧಿಸುವಂತೆ ಯುವಕನ ಸಂಬಂಧಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 17:21 IST
Last Updated 2 ಅಕ್ಟೋಬರ್ 2021, 17:21 IST
ಪ್ರವೀಣ ಪೂಜಾರ
ಪ್ರವೀಣ ಪೂಜಾರ   

ರಟ್ಟೀಹಳ್ಳಿ: ಪ್ರೇಮ ಪ್ರಕರಣದಲ್ಲಿ ಸಿಲುಕಿದ್ದ ಎನ್ನಲಾದ ಯುವಕನೊಬ್ಬನನ್ನು ಥಳಿಸಿ, ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಗಂಗಾಯಿಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗಂಗಾಯಿಕೊಪ್ಪ ಗ್ರಾಮದ ಪ್ರವೀಣ (ರಾಜು) ಪೂಜಾರ (28) ಹತ್ಯೆಯಾದ ಯುವಕ.

ಸಾಯುವುದಕ್ಕೂ ಮುನ್ನ ತನ್ನ ಸ್ನೇಹಿತರಿಗೆ ಪ್ರವೀಣ ಕಳುಹಿಸಿದ್ದ ಎನ್ನಲಾದ ವಾಟ್ಸ್‌ಆ್ಯಪ್‌ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‘ಸುಭಾಷ ಕಡೂರು, ಮಲ್ಲೇಶ ಕಡೂರು, ನಾಗರಾಜ ಕಡೂರು, ಬಂಗಾರಿ ಕಡೂರು, ಸಂಜು ಕಡೂರು, ರಾಮ ಕಡೂರು, ರಂಗಪ್ಪ ಗೊಂಗೇರಿ ಮುಂತಾದವರು ನನ್ನ ಸಾವಿಗೆ ಕಾರಣರಾಗಿದ್ದಾರೆ’ ಎಂದು ಸಂದೇಶದಲ್ಲಿ ಪ್ರವೀಣ ದೂರಿದ್ದಾನೆ.

ADVERTISEMENT

ಬಾಲಕಿಯೊಬ್ಬಳು ತನಗೆ ಪದೇ ಪದೇ ಕರೆ ಮಾಡುತ್ತಿರುವುದನ್ನು ಬಾಲಕಿಯ ಮನೆಯವರಿಗೆ ತಿಳಿಸಿದ್ದೆ. ನಾಲ್ಕು ದಿನಗಳ ಹಿಂದೆ ಸುಭಾಷ ಕಡೂರು ಅವರು ಬಾಲಕಿಯಿಂದ ಮತ್ತೆ ಕರೆ ಮಾಡಿಸಿ, ನಮ್ಮ ಮನೆಯಲ್ಲಿ ಯಾರೂ ಇರುವುದಿಲ್ಲ. ಹೊರಗೆ ಹೋಗೋಣ’ ಎಂದು ಮಾಹಿತಿ ಕೊಡಿಸಿದ್ದರು.

ಸುಭಾಸ ಅವರು ನನ್ನ ತಂದೆಗೆ ಶುಂಠಿ ವ್ಯವಹಾರದ ಸಲುವಾಗಿ ₹20 ಲಕ್ಷ ಕೊಡಬೇಕಾಗಿತ್ತು.ಹೀಗಾಗಿ ಸಂಚು ರೂಪಿಸಿ, ನನ್ನನ್ನು ಹೊಡೆದಿದ್ದಾರೆ. ನನ್ನ ಸಾವಿಗೆ ಈ ಆರೋಪಿಗಳೇ ಕಾರಣ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

‘ನನ್ನ ಮಗ ಪ್ರವೀಣನನ್ನು ಹೊಡೆದು ಕೊಂದಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು’ ಎಂದು ಯುವಕನ ತಂದೆ ತಿಮ್ಮಪ್ಪ ಪೂಜಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಯುವಕನ ತಂದೆ ದೂರು ಕೊಡಲು ಬಂದಾಗ ತಕ್ಷಣ ಪ್ರಕರಣ ದಾಖಲಿಸಿಕೊಳ್ಳದೆ ವಿಳಂಬ ಧೋರಣೆ ಅನುಸರಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತುಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಾವೇರಿ ನಗರದ ಜಿಲ್ಲಾಸ್ಪತ್ರೆ ಮುಂಭಾಗ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.