ಅಕ್ಕಿಆಲೂರ: ಸುಳ್ಳು ಹೇಳುವುದು, ಮೋಸ ಮಾಡುವುದು ಕಾಂಗ್ರೆಸ್ ಪಕ್ಷದ ಅಜೆಂಡಾ. ಈಗ ಎಲ್ಲ ಜನರಲ್ಲಿಯೂ ಜಾಗೃತಿ ಮೂಡಿದೆ. ಒಳ್ಳೆಯದನ್ನು ಮಾಡುವ ಸಾಮರ್ಥ್ಯ ಯಾರಲ್ಲಿದೆ, ಯಾರಲಿಲ್ಲ ಎನ್ನುವುದನ್ನು ಜನರೇ ಅಳೆದು, ತೂಗುತ್ತಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎನ್ನುವುದು ಜನರಿಗೆ ಮನವರಿಕೆಯಾಗಿದೆ ಎಂದು ಶಾಸಕ ಜಗದೀಶ್ ಶೆಟ್ಟರ ಹೇಳಿದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಸೋಮವಾರ ಇಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು. ಕಳೆದ 7 ವರ್ಷಗಳ ಅವಧಿಯಲ್ಲಿ ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರಂಥ ಸಮರ್ಥ ನಾಯಕತ್ವ ಸಿಕ್ಕಿದೆ. ಇಡೀ ಜಗತ್ತು ನಮ್ಮ ಭಾರತ ದೇಶದತ್ತ ತಿರುಗಿ ನೋಡುವಂತಾಗಿದೆ. ಸುದೀರ್ಘ ಅವಧಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ದೇಶಕ್ಕೇನು ಮಾಡಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ನಿಂದ ಅಭಿವೃದ್ಧಿ ಸಾಧ್ಯವಿಲ್ಲ, ಬರೀ ವಿನಾಶ ಎನ್ನುವುದೂ ಮನವರಿಕೆಯಾಗಿದೆ ಎಂದರು.
ದಿ. ಸಿ.ಎಂ.ಉದಾಸಿ ಅವರ ಅಭಿವೃದ್ಧಿಪರ ಕಾರ್ಯಗಳೆಲ್ಲವನ್ನೂ ಮುಂದುವರಿಸಿಕೊಂಡು ಹೋಗುವಲ್ಲಿ ಶಿವರಾಜ ಸಜ್ಜನರ ಸಮರ್ಥರಿದ್ದಾರೆ. ಅಪಪ್ರಚಾರ, ವದಂತಿಗಳಿಗೆ ಕಿವಿಗೊಡದೇ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಸಚಿವ ಎಸ್.ಅಂಗಾರ ಮಾತನಾಡಿ, ಬಿಜೆಪಿಗೆ ನೀತಿ, ಸಿದ್ಧಾಂತ ಇದೆ. ಜನಕಲ್ಯಾಣದ ಕಾರ್ಯಕ್ರಮಗಳಿವೆ. ಕೊರೊನಾವನ್ನು ಸಮರ್ಥವಾಗಿ ತಡೆಗಟ್ಟಿದ ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು ಎನ್ನುವ ಹೆಮ್ಮೆ, ಅಭಿಮಾನ ಎಲ್ಲರಲ್ಲಿಯೂ ಮೂಡಿದೆ. ದೇಶದ ನಾಯಕತ್ವ ಸಮರ್ಥ ನೇತಾರನ ಕೈಯಲ್ಲಿದೆ ಎನ್ನುವ ವಿಶ್ವಾಸ ಜನಸಾಮಾನ್ಯರಲ್ಲಿದೆ. ದಿ.ಸಿ.ಎಂ.ಉದಾಸಿ ಅವರ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತಿವೆ. ಹೀಗಾಗಿ ಸಜ್ಜನರ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರನಟಿ ಮಾಳವಿಕಾ ಅವಿನಾಶ್, ಶಾಸಕ ರಾಜೂಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಹೇಮಲತಾ ಸಜ್ಜನರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಈಳಿಗೇರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.