
ಬ್ಯಾಡಗಿ: ಪಟ್ಟಣದ ಟಿಎಪಿಸಿಎಂಸಿ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಮೂರ್ನಾಲ್ಕು ದಿನಗಳಿಂದ ಮೆಕ್ಕೆಜೋಳದ ಖರೀದಿ ಸಮರ್ಪಕವಾಗಿ ನಡೆಯತ್ತಿಲ್ಲ ಎಂದು ಆರೋಪಿಸಿದ ನೂರಾರು ರೈತರು ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಮೆಕ್ಕೆಜೋಳ ತುಂಬಿದ ಟ್ರ್ಯಾಕ್ಟರ್ಗಳ ಮೂಲಕ ಆಗಮಿಸಿದ ರೈತರು ಮೆಕ್ಕೆಜೋಳದ ಚೀಲಗಳನ್ನು ಕಚೇರಿ ಮುಖ್ಯ ದ್ವಾರದ ಮುಂದೆ ಹಾಕಿ ಬಾಗಿಲು ಬಂದ್ ಮಾಡಿದರು. ಬಳಿಕ ಸರ್ಕಾರ ಮತ್ತು ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಇದರಿಂದ ಕೆಲ ಕಾಲ ಕಚೇರಿ ಕೆಲಸಕ್ಕೆ ಆಗಮಿಸುವ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮುಖಂಡ ಮಂಜುನಾಥ ತೋಟದ ಮಾತನಾಡಿ, ‘ಪಟ್ಟಣದಲ್ಲಿ ನೆಪ ಮಾತ್ರಕ್ಕೆ ಖರೀದಿ ಆರಂಭಿಸಲಾಗಿದೆ. ಮೂರ್ನಾಲ್ಕು ದಿನಗಳಿಂದ ಮೆಕ್ಕೆಜೋಳ ಖರೀದಿ ನಡೆಯುತ್ತಿಲ್ಲ. ರೈತರು ಸಾಲಿನಲ್ಲಿ ನಿಂತು ಕಾಯುತ್ತಿದ್ದರೂ ಟಿಇಪಿಸಿಎಂಎಸ್ ಸಿಬ್ಬಂದಿ ಇತ್ತ ತಿರುಗಿ ನೋಡುತ್ತಿಲ್ಲ. ರೈತರ ಪರವಾಗಿ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿರುವುದು ಬುರುಡೆಯಂತಾಗಿದೆ. ರೈತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ದೂರಿದರು.
ಕೆ.ವಿ.ದೊಡ್ಡಗೌಡ್ರ ಮಾತನಾಡಿ, ‘ರೈತರು ಬಾಡಿಗೆ ಕರಾರಿನಂತೆ ಟ್ರ್ಯಾಕ್ಟರ್ ತಂದು ಕಳೆದ ನಾಲ್ಕು ದಿನಗಳಿಂದ ಕಾಯುತ್ತಿದ್ದೇವೆ. ಖರೀದಿ ಕೇಂದ್ರದ ಅಧಿಕಾರಿಗಳು ನಮ್ಮನ್ನು ಸತಾಯಿಸುತ್ತಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ಹಾಗೂ ಇನ್ನಿತರ ಖರ್ಚನ್ನು ನೀಡುವವರು ಯಾರು ಎಂದು ಪ್ರಶ್ನಿಸಿದ ಅವರು, ಕೂಡಲೇ ಖರೀದಿ ಪ್ರಕ್ರಿಯೆ ಚುರುಕುಗೊಳಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು. ಆದರೂ ಪ್ರತಿಭಟನೆ ಮುಂದುವರೆಯಿತು.
ತಹಶೀಲ್ದಾರ್ ಕಚೇರಿಯೊಳಗೆ ಮೆಕ್ಕೆ ಜೋಳ ಇಳಿಸಲು ಅವಕಾಶ ನೀಡಿ ಖರೀದಿ ಯಾವಾಗಾದರೂ ಮಾಡಿಕೊಳ್ಳಿ ಎಂದು ಪಟ್ಟು ಹಿಡಿದರು.
ಸೋಮವಾರದವರೆಗೆ ಕಾಲಾವಕಾಶ ನೀಡುವಂತೆ ಸಮಜಾಯಿಸಿ ನೀಡಿದ ಬಳಿಕ ಪ್ರತಿಭಟನೆಯನ್ನು ರೈತರು ವಾಪಸ್ ಪಡೆದರು. ನುಡಿದಂತೆ ನಡೆಯದಿದ್ದಲ್ಲಿ ಮಂಗಳವಾರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.