ADVERTISEMENT

ಪ್ರಕರಣ ಶೀಘ್ರ ಇತ್ಯರ್ಥಗೊಳಿಸಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:45 IST
Last Updated 21 ಡಿಸೆಂಬರ್ 2019, 19:45 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್‌ ಮೀನಾ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು   

ಹಾವೇರಿ: ಕಂದಾಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‍ಕುಮಾರ್‌ ಮೀನಾ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ‘ಪೋಡಿ ಪ್ರಕರಣ, ಹದ್ದುಬಸ್ತು ಪ್ರಕರಣ, ಇ– ಸ್ವತ್ತು, ಪಹಣಿ ಪರಿಷ್ಕರಣೆ, ಪಹಣಿ ತಿದ್ದುಪಡಿ ಸೇರಿದಂತೆ ರೈತರಿಗೆ ಅನುಕೂಲವಾಗುವ ಕಂದಾಯ ಇಲಾಖೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳ ಕೋರ್ಟ್‌, ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಎಂದರು.

ಪಹಣಿಗಳ ತಿದ್ದುಪಡಿ ಕಾಲಕಾಲಕ್ಕೆ ನಡೆಯಬೇಕು. ಇದರಲ್ಲಿ ದಾಖಲಾದ ಹಿಡುವಳಿಯ ಹಕ್ಕುದಾರಿಕೆ ವಿಸ್ತೀರ್ಣ ಹಾಗೂ ವಾಸ್ತವದಲ್ಲಿ ಇರುವ ಹಿಡುವಳಿ ಕುರಿತಂತೆ ಪರಿಶೀಲನೆ ನಡೆಸಿ ದಾಖಲಿಸಬೇಕು. ಇ–ಸ್ವತ್ತು, ಪೋಡಿ ಪ್ರಕರಣ, ಮೋಜಣಿ ಪ್ರಕರಣ, ಆರ್.ಟಿ.ಸಿ. ಪರಿಷ್ಕರಣೆ, ಸಕಾಲ ಪ್ರಕರಣಗಳು ಇಳಿಮುಖವಾಗಬೇಕು. ಮುಂದಿನ ಸಭೆಯಲ್ಲಿ ಯಾವುದೇ ಪ್ರಕರಣಗಳು ಬಾಕಿ ಇರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಧಿಕಾರಿಗಳಿಂದ ವಕ್ಫ್ ಭೂಮಿ ಕುರಿತು ಮಾಹಿತಿ ಪಡೆದ ಅವರು, ಯಾವುದೇ ಕಾರಣಕ್ಕೂ ವಕ್ಫ್ ಆಸ್ತಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂ ನೋಂದಣಿ ಕಚೇರಿಯಲ್ಲಿ ಈ ಆಸ್ತಿಗಳನ್ನು ನೋಂದಾಯಿಸುವಂತಿಲ್ಲ. ಈ ಕುರಿತು ಗಮನಹರಿಸುವಂತೆ ಜಿಲ್ಲಾ ನೋಂದಣಾಧಿಕಾರಿಗೆ ಸೂಚಿಸಿದರು.

ಇ- ಆಡಳಿತ ಆರಂಭಿಸುವಂತೆ ಸೂಚನೆ:ಎಲ್ಲ ಇಲಾಖೆಗಳು ಇ–ಆಡಳಿತವನ್ನು ಆರಂಭಿಸಿ ಆನ್‍ಲೈನ್ ಮೂಲಕವೇ ಅರ್ಜಿ ವಿಲೇವಾರಿ ಕೈಗೊಳ್ಳಬೇಕು. ಮೊದಲ ಹಂತದಲ್ಲಿ ಕನಿಷ್ಠ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಅರಣ್ಯ ಇಲಾಖಾ ಕಚೇರಿಯಲ್ಲಿ ಆರಂಭಿಸಬೇಕು ಎಂದರು.

ಭೂ ದರ ಪರಿಷ್ಕರಣೆ: ‌ಭೂಮಿ ದರಗಳನ್ನು ಪರಿಷ್ಕರಿಸುವಾಗ ಮಾರುಕಟ್ಟೆಯ ದರಕ್ಕೆ ಹತ್ತಿರವಿರಲಿ. ಮಾರುಕಟ್ಟೆ ದರಕ್ಕೂ ನೋಂದಣಿಯ ದರಕ್ಕೂ ಬಹಳ ವ್ಯತ್ಯಾಸವಿದೆ. ಭೂಸ್ವಾಧೀನಗಳ ಸಂದರ್ಭದಲ್ಲಿ ರೈತರಿಂದ ಹೆಚ್ಚುವರಿ ದರ ನಿಗದಿ ಮಾಡುವಂತೆ ಬೇಡಿಕೆಗಳು ಬರುತ್ತಿವೆ. ಸರ್ಕಾರಿ ನೋಂದಣಿ ದರಕ್ಕೂ ವಾಸ್ತವವಾಗಿ ಖಾಸಗಿಯಾಗಿ ಮಾರಾಟ ದರಕ್ಕೂ ಬಹಳಷ್ಟು ಅಂತವಿರುವುದನ್ನು ತಗ್ಗಿಸಬೇಕು. ಈ ಕುರಿತು ಉಪ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರಗಳು ಚರ್ಚಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.