ಹಾವೇರಿ: ‘ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಕುರಿಗಾರರ ನೆರವಿಗೆ ಬಂದಿದ್ದು, ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಹಣ ಬಿಡುಗಡೆಯಾಗಿದ್ದು, ಆರ್.ಟಿ.ಜಿ.ಎಸ್ ಮೂಲಕ ಸಂದಾಯ ಮಾಡಲಾಗುವುದು ಎಂದು ಶಾಸಕ ನೆಹರು ಓಲೇಕಾರ ಹೇಳಿದರು.
ನಗರದ ಪಶು ಆಸ್ಪತ್ರೆಯಲ್ಲಿ ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಕುರಿಗಾರರಿಗೆ 2018-19 ಮತ್ತು 2019-20ನೇ ಸಾಲಿನ ಸತ್ತ ಕುರಿಗಳ ಮಾಲೀಕರಿಗೆ ಪರಿಹಾರ ಧನ ವಿತರಿಸಿ ಅವರು ಮಾತನಾಡಿದರು.
ಸರ್ಕಾರವು ರೈತರಿಗೆ ಮತ್ತು ಕುರಿಗಾರರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮತ್ತು ಕುರಿ ಹಾಗೂ ಮೇಕೆಗಳ ಸಲುವಾಗಿ ಅತ್ಯಾಧುನಿಕ (ಪಾಲಿಕ್ಲಿನಿಕ್) ಆಸ್ಪತ್ರೆಯನ್ನು ಹಾವೇರಿಯಲ್ಲಿ ಆರಂಭಿಸಲಾಗಿದೆ. ಎಲ್ಲಾ ರೈತ ಭಾಂದವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕ ಡಾ.ಬಸವರಾಜ ಡಿ.ಸಿ ಅವರು ಇಲಾಖೆ ಮತ್ತು ಕುರಿ ಉಣ್ಣೆ ಅಭಿವೃದ್ದಿ ನಿಗಮದ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಸಿ.ಪಾಟೀಲ ಸ್ವಾಗತಿಸಿದರು.
ಪ್ರಭಾರ ಉಪನಿರ್ದೇಶಕ ಡಾ.ಎಚ್.ಬಿ.ಸಣ್ಣಕ್ಕಿ (ಪಾಲಿಕ್ಲಿನಿಕ್) ಕಂದು ರೋಗದ ಬಗ್ಗೆ ಮಾಹಿತಿ ನೀಡಿದರು. ಪರಶುರಾಮ ಹರಿಜನ, ಹನುಮಂತಪ್ಪ ಕುಮಣ್ಣನವರ, ಶ್ರೀಕಾಂತ ಪೂಜಾರ, ಮುಖ್ಯ ಪಶುವೈದ್ಯಾಧಿಕಾರಿ ಡಾ.ದಿವಾಕರ ನಾಡಗೇರ, ಡಾ.ಗಂಗಾಧರ ಸುಕ್ತೆ, ಡಾ.ವಿಜಯಕುಮಾರ ಹಳಕಟ್ಟಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಎಫ್.ಕರಿಯಪ್ಪನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.