ಹಾವೇರಿ: ‘ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಅಶ್ಲೀಲ ಸಾಹಿತ್ಯದ ಹಾಡುಗಳನ್ನು ಹರಿಬಿಟ್ಟು, ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದ್ದಾರೆ. ಇಂಥ ಯೂಟ್ಯೂಬರ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು, ಕೃತ್ಯಕ್ಕೆ ಕಡಿವಾಣ ಹಾಕಬೇಕು’ ಎಂದು ಕಲಾವಿದೆ ಶೀಲಾ ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಕೆಲ ಕಲಾವಿದರು, ಅಶ್ಲೀಲ ಪದಗಳ ಮೂಲಕ ಹಾಡುಗಳನ್ನು ರಚಿಸುತ್ತಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಚಿತ್ರಿಸುತ್ತಿದ್ದಾರೆ. ಇಂಥ ಸಾಹಿತ್ಯದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.
‘ಅಶ್ಲೀಲ ಹಾಗೂ ಕೀಳುಮಟ್ಟದ ಪದಗಳನ್ನು ಬಳಸುವ ಮೂಲಕ ಜಾನಪದ ಸಾಹಿತ್ಯಕ್ಕೂ ಕೆಲ ಯೂಟ್ಯೂಬರ್ಗಳು ಕಂಟಕ ತರುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಪ್ರತ್ಯೇಕ ಕಾನೂನು ರೂಪಿಸಬೇಕು. ಈಗಾಗಲೇ ಅಶ್ಲೀಲ ಪದಗಳ ಮೂಲಕ ಹಾಡು ರಚಿಸಿ ಹರಿಬಿಟ್ಟಿರುವವರು ತಪ್ಪು ತಿದ್ದಿಕೊಂಡು, ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಹಾಕಬೇಕು. ಇಲ್ಲದಿದ್ದರೆ, ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಮಠ, ಜಾತ್ರೆಗಳಲ್ಲೂ ಪ್ರಾಶಸ್ತ್ಯ: ‘ಅಶ್ಲೀಲ ಪದಗಳ ಮೂಲಕವೇ ಕೆಲವರು, ಸೆಲೆಬ್ರಿಟಿಗಳ ರೀತಿ ವರ್ತಿಸುತ್ತಿದ್ದಾರೆ. ಅಂಥವರನ್ನೇ ಕೆಲ ಮಠಗಳ ಕಾರ್ಯಕ್ರಮ ಹಾಗೂ ಜಾತ್ರೆಗೆ ಕರೆಸಿ ಲಕ್ಷಾಂತರ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ. ಇಂಥ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿಯೂ ಇನ್ನು ಮುಂದೆ ಹೋರಾಟ ನಡೆಸುತ್ತೇವೆ’ ಎಂದು ಅವರು ಹೇಳಿದರು.
‘ಅಶ್ಲೀಲ ಸಾಹಿತ್ಯದ ಯೂಟ್ಯೂಬರ್ಗಳ ಪಟ್ಟಿ ಮಾಡಿ, ಸಚಿವರು, ಜಿಲ್ಲಾಧಿಕಾರಿಯವರು ಹಾಗೂ ಎಸ್.ಪಿ.ಗಳಿಗೂ ಮನವಿ ಸಲ್ಲಿಸಲಾಗಿದೆ’ ಎಂದರು.
ಪ್ರಥ್ವಿರಾಜ ಬೆಟಗೇರಿ, ರೇಣುಕಾ ಗುಡಿಮನಿ, ಅಮರ ಜವಳಿ, ಯಲ್ಲಪ್ಪ ಆಲದಕಟ್ಟಿ, ವಾಣಿ ಕಣೇಕರ್, ಕೆ.ಸಿ. ನಾಗರಜ್ಜಿ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.