ಹಾವೇರಿ: ಆನ್ಲೈನ್ ಮದ್ಯ ಮಾರಾಟ ವ್ಯವಸ್ಥೆ ಜಾರಿಗೊಳಿಸಬಾರದು, ಹೆಚ್ಚಿರುವ ಅಬಕಾರಿ ಶುಲ್ಕವನ್ನು ಕಡಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಮದ್ಯ ಮಾರಾಟ ಸನ್ನದುದಾರರ ಸಂಘದ ಕರೆಯ ಮೇರೆಗೆ ಜಿಲ್ಲೆಯಲ್ಲಿಯೂ ಮದ್ಯ ಮಾರಾಟ ಸನ್ನದುದಾರರು ಬುಧವಾರ ‘ಮದ್ಯ ಖರೀದಿ ಸ್ಥಗಿತ ಚಳವಳಿ’ ನಡೆಸಿದರು.
‘ನಮ್ಮ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಈ ಚಳವಳಿ ನಡೆಸಲಾಗಿದೆ. ಗ್ರಾ.ಪಂ. ಹೆದ್ದಾರಿಗಳಲ್ಲಿ ಸಿಎಲ್-7 ಹಾಗೂ ಸಿಎಲ್-6ಎ ಸನ್ನದುಗಳ ಆರಂಭಕ್ಕೆ ನೀಡಿರುವ ಆದೇಶ ವಾಪಸ್ ಪಡೆಯಬೇಕು. ಕೊರೊನಾ ಸಮಯದಲ್ಲಿ ಸನ್ನದುದಾರರಿಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು. ಹೊಸದಾಗಿ ಎಂಎಸ್ಐಎಲ್ ಹಾಗೂ ಸಿಎಲ್-11ಸಿ ಗಳಿಗೆ ಅನುಮತಿ ನೀಡಬಾರದು. ಸಿಎಲ್-2 ಸನ್ನದುಗಳಿಗೆ ಹಿಂದೆ ಇದ್ದ ಲಾಭಾಂಶವನ್ನು ನೀಡಬೇಕು’ ಎಂದು ಮದ್ಯ ಮಾರಾಟಗಾರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ಬಸವರಾಜ ಬೆಳವಡಿ ಒತ್ತಾಯಿಸಿದರು.
ಅಬಕಾರಿ ಅಧಿಕಾರಿಗಳ ಮಿತಿಮೀರಿದ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು. ಸನ್ನದುಗಳಲ್ಲಿ ಪೊಲೀಸ್ ಇಲಾಖೆಯ ಮಿತಿಮೀರಿದ ಹಸ್ತಕ್ಷೇಪ ಮತ್ತು ಹಣ ಸುಲಿಗೆಯನ್ನು ನಿಯಂತ್ರಿಸಬೇಕು. ಸಿಎಲ್-2ಗಳಲ್ಲಿ ಮದ್ಯ ಸೇವನೆಗೆ ಹಾಗೂ ಸಿಎಲ್-9 ಗಳಲ್ಲಿ ಮದ್ಯ ಪಾರ್ಸೆಲ್ಗೆ ಅನುಮತಿ ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಸನ್ನದುದಾರರು ಆಗ್ರಹಿಸಿದರು.
ಸನ್ನದುದಾರರ ‘ಪರ್ಮಿಟ್ ಬಂದ್’ ಚಳವಳಿಯಿಂದ ಜಿಲ್ಲೆಯ ಕೆಲವು ಮದ್ಯದಂಗಡಿಗಳಲ್ಲಿ ಕೆಲ ನಿಗದಿತ ಬ್ರ್ಯಾಂಡ್ಗಳ ಮದ್ಯದ ಕೊರತೆ ಕಂಡುಬಂದಿತು. ಇದರಿಂದ ಗ್ರಾಹಕರು ಅನ್ಯ ಬ್ರ್ಯಾಂಡ್ಗಳನ್ನು ಅನಿವಾರ್ಯವಾಗಿ ಖರೀದಿಸುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.