ಹಾವೇರಿ: ರಾಜ್ಯದಲ್ಲಿ ಖಾಸಗಿ ಸಂಸ್ಥೆ ಮತ್ತು ಐಟಿ–ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ 80ರಷ್ಟು ಉದ್ಯೋಗ ಕಲ್ಪಿಸಲು ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ರಾಮಭಕ್ತ ಮಂಜುನಾಥ್ ಆಗ್ರಹಿಸಿದರು.
ಬೆಂಗಳೂರಿನ ಹೂಡಿ ಗ್ರಾಮದಿಂದ ಬೆಳಗಾವಿಯ ಸುವರ್ಣಸೌಧದವರೆಗೂ 520 ಕಿ.ಮೀ. ಕೈಗೊಂಡಿರುವ ಪಾದಯಾತ್ರೆಯು ಮಂಗಳವಾರ ನಗರ ತಲುಪಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’. ಆದರೆ, ಸಿ ಮತ್ತು ಡಿ ದರ್ಜೆಯ ನೌಕರಿಗಳು ಮಾತ್ರ ಕನ್ನಡಿಗರಿಗೆ ಸಿಗುತ್ತಿವೆ. ಐಎಎಸ್, ಐಪಿಎಸ್ ಹುದ್ದೆಗಳನ್ನು ಬಹುಪಾಲು ಹೊರರಾಜ್ಯದವರೇ ಕಬಳಿಸುತ್ತಿದ್ದಾರೆ. ಹಾಗಾಗಿ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಶೇ 80ರಷ್ಟು ಉದ್ಯೋಗಗಳು ಕನ್ನಡಿಗರಿಗೆ ಸಿಗಬೇಕು ಎಂದು ಒತ್ತಾಯಿಸಿದರು.
‘ಫೆ.2ರಂದು ಬೆಂಗಳೂರಿನ ಹೂಡಿ ಗ್ರಾಮದಿಂದ ಹೊರಟು, ಫೆ.11ಕ್ಕೆ ಹಾವೇರಿ ತಲುಪಿದ್ದೇವೆ. ಫೆ.15ಕ್ಕೆ ಬೆಳಗಾವಿಯ ಸುವರ್ಣಸೌಧ ತಲುಪಲಿದ್ದೇವೆ. ನಮ್ಮ ಹೋರಾಟಕ್ಕೆ ಬೆಂಬಲ ನೀಡುವವರು ಮೊ:9319464683 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಬೆಂಬಲಿಸಬಹುದು’ ಎಂದು ‘ಕರವೇ ಗಜಸೇನೆ’ಯ ಬೆಂಗಳೂರು ನಗರ ಉಪಾಧ್ಯಕ್ಷ ದಿಲೀಪ್ಕುಮಾರ್ ಹೇಳಿದರು.
ಪಾದಯಾತ್ರೆಯಲ್ಲಿ ಆಂಜಿ, ದಿನೇಶ್, ಮುನಿಕೃಷ್ಣ, ನಿಂಗರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.