ಗುತ್ತಲ: ನೆರೆಹಾವಳಿ ಸೇರಿದಂತೆ ಹಲವಾರು ಸಂಕಷ್ಟಗಳ ಮಧ್ಯೆ, ಭತ್ತ ಬೆಳೆದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ತುಂಗಭದ್ರಾ, ವರದಾ ಮತ್ತು ತುಂಗಾ ಮೇಲ್ದಂಡೆ ಕಾಲುವೆ ಆಶ್ರಿತ ಸುಮಾರು 876 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆಗೆ ‘ಗಂದಿದಗ್ಗ’ ಕೀಟದ ಬಾಧೆ ಹೆಚ್ಚಾಗಿರುವುದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ.
‘ಕಾಳು ಕಟ್ಟುವ ತೆನೆಯ ಮೇಲೆ ಕುಳಿತು ರಸ ಹೀರುವ ಈ ಕೀಟಗಳಿಂದಾಗಿ ಸಂಪೂರ್ಣ ಭತ್ತದ ಬೆಳೆ ಜೊಳ್ಳಾಗಿ ಇಳುವರಿ ಕಡಿಮೆ ಬರುತ್ತಿದೆ. ಎಕರೆಗೆ 30 ರಿಂದ 35 ಕ್ವಿಂಟಲ್ ಭತ್ತ ಬರಬೇಕಾದ ಬೆಳೆಯಲ್ಲಿ ಕೇವಲ 10 ರಿಂದ 15 ಕ್ವಿಂಟಲ್ ಬರಬಹುದು’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
‘ಈ ಕೀಟಕ್ಕೆ ಅಗಂಡಿಗಳಲ್ಲಿ ಸೂಕ್ತವಾದ ಔಷಧಿ ಸಿಗುತ್ತಿಲ್ಲ. ಬೇರೆ ಬೇರೆ ಔಷಧಿಯನ್ನು ಸಿಂಪರಣೆ ಮಾಡಿದರೆ ಈ ಕೀಟ ಸಾಯುತ್ತಿಲ್ಲ’ಎಂದು ಕೆಲವು ರೈತರು ಹೇಳಿದರು.
ಕೀಟಗಳ ಹತೋಟಿ ಭಯಬೇಡ :
ಹನಮನಮಟ್ಟಿ ಕೃಷಿ ಮಹಾವಿದ್ಯಾಲಯದ ಕೃಷಿ ಕೀಟ ಶಾಸ್ತ್ರದ ಪ್ರಾಧ್ಯಾಪಕ ಡಾ.ಆರ್.ವೀರಣ್ಣ ಅವರಿಗೆ ಈ ಕೀಟ ಬಾಧೆಯ ಬಗ್ಗೆ ರೈತರು ವಿವರಿಸಿದ್ದಾರೆ. ಅವರು ಈ ರೋಗಕ್ಕೆ ಎರಡು ತರಹದ ಔಷಧಿ ಸಿಂಪಡಿಸಲು ಹೇಳಿದ್ದು, ಮಳೆ ಇಲ್ಲದ ಸಮಯವನ್ನು ನೋಡಿಕೊಂಡು ಸಿಂಪರಣೆ ಮಾಡಬೇಕು. ಈ ಕೀಟಗಳ ಬಗ್ಗೆ ಭಯಬೇಡ ಎಂದು ತಿಳಿಸಿದ್ದಾರೆ.
ಒಂದು ಹೆಕ್ಟೇರ್ಗೆ 20 ಕೆ.ಜಿ ಯಷ್ಟು ಮೆಲಾಥಿಯನ್ ಪುಡಿಯನ್ನು ಬಳಸಬೇಕು. ಈ ಪುಡಿಯನ್ನು ತೆಳುವಾದ ಬಟ್ಟೆಯಲ್ಲಿ ತೆಗೆದುಕೊಂಡು ಬೆಳೆಯ ಮೇಲೆ ಹಾಕಿದರೆ ಕೀಟ ಸಾಯುತ್ತದೆ. ಅಥವಾ ಮೆಲಾಥಿಯನ್ ಔಷಧಿ ಸಿಂಪಡಿಸಬೇಕು. ಇಲ್ಲದಿದ್ದರೆ ಕರಾಟೆ ಔಷಧಿಯನ್ನು ಸಿಂಪಡಿಸಬೇಕು. 16 ಲೀಟರ್ ನೀರಿಗೆ 16 ಎಂ.ಎಲ್ ಔಷಧಿ ಬೆರೆಸಿ ಸಿಂಪಡಿಸಿದರೆ ಕೀಟ ಸಾಯುತ್ತವೆ ಎಂದು ಅವರು ರೈತರಿಗೆ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.