
ಹಾನಗಲ್: ಶರಣ ಪರಂಪರೆ, ಸಂಸ್ಕೃತಿಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ ಕಾಳಜಿ ಅನುಕರಣೀಯ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಪಂಚಾಕ್ಷರಿ ಗವಾಯಿಗಳ 135ನೇ ಜಯಂತ್ಯುತ್ಸವ, ಸಂಗೀತೋತ್ಸವ ಹಾಗೂ ಹಕ್ಕಲ ಬಸವೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಂಧರಾಗಿ ಹುಟ್ಟಿದ ಗವಾಯಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರು. ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಕರುಣೆಯ ಕಂದನಾಗಿ ಬೆಳೆದು ಸಂಗೀತದಲ್ಲಿ ಪರಿಣಿತರಾಗಿ ಶ್ರೇಷ್ಠ ಗವಾಯಿಗಳೆನಿಸಿದರು ಎಂದರು.
ಶಾಸಕ ಶ್ರೀನಿವಾಸ ಮಾನೆ, ಪಂಚಾಕ್ಷರಿ ಗವಾಯಿಗಳ ಗಾಯನದಲ್ಲಿ ಭಕ್ತಿ, ಶುದ್ಧತೆ ಮತ್ತು ಆತ್ಮಸ್ಪರ್ಶ ಭಾವನೆಗಳು ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದ್ದವು. ಶಿಸ್ತು ಮತ್ತು ಸತ್ಯನಿಷ್ಠೆಗೆ ಅವರ ಜೀವನ ಸರಳತೆಯು ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.
ಹೋತನಹಳ್ಳಿಯ ಸಿಂಧಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಮಾಣಿಕ್ಕೇಶ್ವರಿ ಮಾತಾ ಸಮ್ಮುಖ ವಹಿಸಿದ್ದರು. ಸಂಗೀತ ಕಲಾವಿದರಿಂದ ಸಂಗೀತೋತ್ಸವ ನಡೆಯಿತು.
ಚಂದ್ರಗೌಡ ಪಾಟೀಲ, ಚಂಪಾವತಿ ಪೂಜಾರ, ತಿರಕಪ್ಪ ಗಾಣಗೇರ, ಸಿದ್ದಲಿಂಗ ಲಕ್ಮಾಪೂರ, ಪಂಚಾಕ್ಷರಿ ದೊಡ್ಡಹುಣಸಿಕಟ್ಟಿ, ಶಿವಪ್ಪ ಗಿರಿಯಪ್ಪವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.